ADVERTISEMENT

ಎಂಬತ್ತಾದರೂ ಬತ್ತದ ಜೀವನೋತ್ಸಾಹ: ಮಾಸ್ಟರ್ ಅಥ್ಲೀಟ್‌ ಗುರುಶಾಂತಪ್ಪ ಸಂದರ್ಶನ

ಮಾಸ್ಟರ್ಸ್‌ ಅಥ್ಲೆಟಿಕ್ಸ್‌ನಲ್ಲಿ ಹೆಜ್ಜೆ ಗುರುತು ಮೂಡಿಸಿರುವ ದಾವಣಗೆರೆಯ ಗುರುಶಾಂತಪ್ಪ

ಜಿ.ಶಿವಕುಮಾರ
Published 18 ಫೆಬ್ರುವರಿ 2025, 6:54 IST
Last Updated 18 ಫೆಬ್ರುವರಿ 2025, 6:54 IST
<div class="paragraphs"><p>ಕೂಟವೊಂದರ ಲಾಂಗ್‌ ಜಂಪ್‌ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಗುರುಶಾಂತಪ್ಪ</p></div><div class="paragraphs"></div><div class="paragraphs"><p><br></p></div>

ಕೂಟವೊಂದರ ಲಾಂಗ್‌ ಜಂಪ್‌ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಗುರುಶಾಂತಪ್ಪ


   

ದಾವಣಗೆರೆ: ‘ವಯಸ್ಸು 60 ದಾಟಿದ್ರೆ ಸಾಕು. ಬಹಳಷ್ಟು ಜನ ಆಸ್ಪತ್ರೆಗಳಿಗೆ ಎಡತಾಕ್ತಾರೆ. ಬಿಪಿ, ಶುಗರ್‌ ಅಂತೇಳಿ ಆ ಪರೀಕ್ಷೆ, ಈ ಪರೀಕ್ಷೆ ಮಾಡಿಸ್ತಾರೆ. ನನ್ಗೆ ಈ ತಾಪತ್ರಯ ಇಲ್ಲ. ನನ್‌ ಕಂಡ್ರೆ ಈ ಬಿ‍‍ಪಿ, ಶುಗರ್‌ಗೂ ಭಯ...’

ADVERTISEMENT

ದಾವಣಗೆರೆಯ ಎಸ್‌.ಎಸ್‌.ಲೇಔಟ್‌ನ ‘ಬಿ’ ಬ್ಲಾಕ್‌ ನಿವಾಸಿ ಗುರುಶಾಂತಪ್ಪನವರ ಆತ್ಮವಿಶ್ವಾಸದ ನುಡಿಗಳಿವು. 80ರ ಹರೆಯದ ಇವರ ಬದುಕು ಎಲ್ಲರಿಗೂ ಮಾದರಿ. 

‘ವಯಸ್ಸು ದೇಹಕ್ಕಷ್ಟೇ, ಮನಸ್ಸಿಗಲ್ಲ’ ಎಂದು ಹೇಳುವ ಇವರಲ್ಲಿ ಅದಮ್ಯ ಜೀವನೋತ್ಸಾಹ ಇದೆ. ಪ್ರತಿನಿತ್ಯ ಬೆಳಿಗ್ಗೆ 4 ಗಂಟೆಗೇ ಎದ್ದು 15 ಕಿ.ಮೀ ನಡೆಯುತ್ತಾರೆ. ಕೆಲಸಕ್ಕೆಂದು ಎಲ್ಲಿಗಾದರೂ ಹೋಗಬೇಕೆಂದರೆ ಸೈಕಲ್‌ನಲ್ಲೇ ಪ್ರಯಾಣ ಕೈಗೊಳ್ಳುತ್ತಾರೆ. ಮಾಸ್ಟರ್ಸ್‌ ಅಥ್ಲೆಟಿಕ್ಸ್‌ನಲ್ಲಿ ರಾಜ್ಯ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪಾಲ್ಗೊಂಡು ನೂರಾರು ಪದಕಗಳನ್ನು ಗೆದ್ದಿದ್ದಾರೆ. ಈ ಸಾಧನೆ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.

ಮಾಸ್ಟರ್ಸ್‌ ಅಥ್ಲೆಟಿಕ್ಸ್‌ ಪಯಣ ಶುರುವಾಗಿದ್ದು ಹೇಗೆ?

ಶಾಲಾ ದಿನಗಳಲ್ಲಿ ವಾಲಿಬಾಲ್‌, ಬ್ಯಾಡ್ಮಿಂಟನ್‌, ಫುಟ್‌ಬಾಲ್‌ ಆಡುತ್ತಿದ್ದೆ. ಕಾಲೇಜು ಸೇರಿದ ಮೇಲೆ ಕುಸ್ತಿ ಮತ್ತು ವಾಲಿಬಾಲ್‌ನತ್ತ ಗಮನಹರಿಸಿದೆ. ಪಿಯುಸಿ ನಂತರ ಡಿಸಿಸಿ ಬ್ಯಾಂಕ್‌ನಲ್ಲಿ ಕೆಲಸ ಸಿಕ್ಕಿತ್ತು. ಚನ್ನಗಿರಿ ಹಾಗೂ ಹೊನ್ನಾಳಿಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿ ಪಡೆದೆ. ನ್ಯಾಮತಿಯ ಕಂಚುಗಾರನಹಳ್ಳಿಯಲ್ಲಿ ಜಮೀನು ಇತ್ತು. ಅಲ್ಲಿ 15 ವರ್ಷ ಕೃಷಿ ಮಾಡಿದೆ. ಮಕ್ಕಳ ವಿದ್ಯಾಭ್ಯಾಸದ ಸಲುವಾಗಿ ದಾವಣಗೆರೆಗೆ ಬಂದ ನಂತರ ಮಾಸ್ಟರ್ಸ್‌ ಅಥ್ಲೆಟಿಕ್ಸ್‌ನಲ್ಲಿ ತೊಡಗಿಕೊಂಡೆ.

2011ರಲ್ಲಿ ಮಂಗಳೂರಿನಲ್ಲಿ ನಡೆದಿದ್ದ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಸಲ ಪಾಲ್ಗೊಂಡಿದ್ದೆ. 2014ರಲ್ಲಿ ಶ್ರೀಲಂಕಾ, ನಂತರ ಮಲೇಷ್ಯಾ, ಥಾಯ್ಲೆಂಡ್‌ ಹೀಗೆ ನಾನಾ ದೇಶಗಳಿಗೂ ಹೋಗಿದ್ದೇನೆ. ಕೇರಳದಲ್ಲಿ ನಡೆದಿದ್ದ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ 65 ಕೆ.ಜಿ ವಿಭಾಗದಲ್ಲಿ ಪಾಲ್ಗೊಳ್ಳಬೇಕಿತ್ತು. ಅದಕ್ಕಾಗಿ 70ನೇ ವಯಸ್ಸಿನಲ್ಲಿ 2 ಕೆ.ಜಿ. ತೂಕ ಇಳಿಸಿದ್ದೆ.  

ಈ ವಯಸ್ಸಿನಲ್ಲೂ ಫಿಟ್‌ನೆಸ್‌ ಹೇಗೆ ಕಾಪಾಡಿಕೊಳ್ಳುತ್ತೀರಿ?

ನಿತ್ಯ ಬೆಳಿಗ್ಗೆ 4.30ರಿಂದ 7.30ರವರೆಗೆ ಕುಂದವಾಡ ಕೆರೆ ಬಳಿ ವಾಕಿಂಗ್‌ ಮಾಡುತ್ತೇನೆ. ರಾತ್ರಿ ಬಾದಾಮಿ, ಉತ್ತುತ್ತಿ, ಗೋಡಂಬಿ ಹಾಗೂ ದ್ರಾಕ್ಷಿ ನೆನೆಯಲು ಇಟ್ಟು, ವಾಕಿಂಗ್‌ನಿಂದ ಬಂದ ನಂತರ ಅದನ್ನೆಲ್ಲಾ ರುಬ್ಬಿ ಕುಡಿಯುತ್ತೇನೆ. 11 ಗಂಟೆಗೆ ಉಪಾಹಾರ, ಮಧ್ಯಾಹ್ನ 3 ಗಂಟೆಗೆ ಊಟ, ಸಂಜೆ ಕಾಫಿ. ರಾತ್ರಿ 9ರ ಸುಮಾರಿಗೆ ಊಟ ಮುಗಿಸಿ 11 ಗಂಟೆಗೆ ಮಲಗುತ್ತೇನೆ.  ಈ ದಿನಚರಿಯನ್ನು ಪಾಲಿಸಿಕೊಂಡು ಬಂದಿದ್ದೇನೆ.

ಗರಡಿ ಮನೆಯಲ್ಲಿ ಕಸರತ್ತು ನಡೆಸುತ್ತಿದ್ದ ದಿನಗಳಲ್ಲಿ ಪೌಷ್ಠಿಕ ಆಹಾರ ಸೇವಿಸುತ್ತಿದ್ದೆ. ನ್ಯಾಮತಿಯಲ್ಲಿದ್ದಾಗ ಹೊಲದಲ್ಲಿನ ಹಾಲು ತುಂಬಿದ ಗೋದಿ ತೆನೆಗಳನ್ನು ತಿನ್ನುವ ಅಭ್ಯಾಸ ಇತ್ತು. ಹೀಗೆ ತಿಂದಿ ಬೆಳೆದಿರುವುದರಿಂದ ಈಗಲೂ ಗಟ್ಟಿಮುಟ್ಟಾಗಿದ್ದೇನೆ.

ಪ್ರತಿ ದಿನ ವಾಕಿಂಗ್‌ ಜೊತೆ ಅಭ್ಯಾಸವನ್ನೂ ಮಾಡುವುದರಿಂದ ದೇಹ ತುಂಬಾ ದಣಿಯುವುದಿಲ್ಲವೇ?

ಎಷ್ಟೇ ಕಸರತ್ತು ನಡೆಸಿದರೂ ಆಯಾಸ ಆಗೋದಿಲ್ಲ. ಮೂರು ವರ್ಷಗಳ ಹಿಂದೆ ನಾವು ಬೆಂಗಳೂರಿನಿಂದ ತಿರುಪತಿಗೆ ಪಾದಯಾತ್ರೆ ಕೈಗೊಂಡಿದ್ದೆವು. ಒಂದು ದಿನ 45 ಕಿ.ಮೀ. ನಡೆದು ಹೋಗಬೇಕಿತ್ತು. ಜೊತೆಗೆ ಬಂದವರೆಲ್ಲಾ ಸುಸ್ತಾಗಿ ಮಲಗಿದ್ದರು. ನಾನು ಬೆಳಿಗ್ಗೆ 1.30ಕ್ಕೆ ಎದ್ದು ಏಕಾಂಗಿಯಾಗಿ ನಡೆದು ತಿರುಪತಿ ತಲುಪಿದ್ದೆ. ಬದುಕಲ್ಲಿ ಸಾಕಷ್ಟು ಹಣ ಕಳೆದುಕೊಂಡಿರಬಹುದು. ಆದರೆ ಉತ್ಸಾಹ ಯಾವತ್ತೂ ಕಳೆದುಕೊಂಡಿಲ್ಲ.

ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಸಾಕಷ್ಟು ಹಣ ಬೇಕು. ಅದನ್ನೆಲ್ಲಾ ಹೇಗೆ ಹೊಂದಿಸುತ್ತೀರಿ?

ದಾವಣಗೆರೆಯಲ್ಲಿ ದಾನಿಗಳಿಗೆ ಕೊರತೆ ಇಲ್ಲ. ನಾನು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದೇನೆ ಎಂದು ಗೊತ್ತಾದ ಕೂಡಲೇ ₹10,000, ₹20,000 ಹೀಗೆ ಧಾರಾಳವಾಗಿ ನೆರವು ಕೊಡುತ್ತಾರೆ. ಪಾಲಿಕೆಯಿಂದಲೂ ₹10,000 ಸಿಗುತ್ತದೆ. ದಾನಿಗಳ ಸಹಕಾರ ಇಲ್ಲದೇ ಹೋಗಿದ್ದರೆ ಇಷ್ಟೆಲ್ಲಾ ಸಾಧನೆ ಮಾಡಲು ಆಗುತ್ತಲೇ ಇರಲಿಲ್ಲ. 

ಕುಟುಂಬದ ಬಗ್ಗೆ ಹೇಳಿ?

ಮೂರು ಗಂಡು ಹಾಗೂ ಒಬ್ಬಳು ಹೆಣ್ಣು ಮಗಳು. ದೊಡ್ಡ ಮಗ ಕೆಲ ವರ್ಷಗಳ ಹಿಂದೆ ತೀರಿಕೊಂಡ. 6 ಜನ ಮೊಮ್ಮಕ್ಕಳು ಇದ್ದಾರೆ. ಮರಿ ಮಕ್ಕಳನ್ನೂ ನೋಡುತ್ತೇನೆಂಬ ವಿಶ್ವಾಸ ಇದೆ. 

ಇತ್ತೀಚಿನ ಪ್ರಮುಖ ಸಾಧನೆಗಳು

  • ದಕ್ಷಿಣ ಭಾರತ ಮಾಸ್ಟರ್ಸ್‌ ಅಥ್ಲೆಟಿಕ್ಸ್‌ ಸಂಸ್ಥೆಯಿಂದ ಮಂಗಳೂರಿನಲ್ಲಿ ನಡೆದ ಕೂಟದ ಟ್ರಿಪಲ್‌ ಜಂಪ್‌ನಲ್ಲಿ ಚಿನ್ನದ ಪದಕ ಹಾಗೂ ಲಾಂಗ್‌ ಜಂಪ್‌ನಲ್ಲಿ ಬೆಳ್ಳಿ.

  • ರಾಜಸ್ಥಾನದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದ ಹ್ಯಾಮರ್‌ ಥ್ರೋ ಹಾಗೂ ಟ್ರಿಪಲ್ ಜಂಪ್‌ನಲ್ಲಿ ಚಿನ್ನದ ಪದಕ ಹಾಗೂ ಶಾಟ್‌ಪಟ್‌ನಲ್ಲಿ ಕಂಚು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.