ಮಾಯಕೊಂಡ: ಕೊಳೆತ ತರಕಾರಿ, ಹುಳುಗಳು ಬಿದ್ದಿದ್ದ ಬೇಳೆ, ಮುಗ್ಗು ಬಂದಿದ್ದ ಅಕ್ಕಿ, ಗಬ್ಬುನಾರುವ ಶೌಚಾಯಲಯ...!
–ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಇಲ್ಲಿನ ಸರ್ಕಾರಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಪ್ರತಿಭಾನ್ವಿತ ಬಾಲಕಿಯರ ವಸತಿ ಶಾಲೆಗೆ ಭೇಟಿ ನೀಡಿದಾಗ ಕಂಡು ಬಂದ ಚಿತ್ರಣ.
ಪಾಚಿ ಕಟ್ಟಿದ ಸ್ನಾನ ಗೃಹ, ತುಕ್ಕು ಹಿಡಿದ ಬಿಸಿ ನೀರಿನ ಗೀಜರ್ ಕಂಡು ವಾರ್ಡನ್, ಅಡುಗೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಅಧಿಕಾರಿಗಳು, ಅಡುಗೆ ತಯಾರು ಮಾಡುವ ಕೊಠಡಿ, ಸಾಮಗ್ರಿಗಳ ಕೊಠಡಿ, ಶೌಚಾಲಯ ಸೇರಿದಂತೆ ವಸತಿ ಕೊಠಡಿಗಳನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಅರೆ ಬೆಂದಿದ್ದ ಅನ್ನ, ಬೇಳೆ ಇಲ್ಲದ ಸಾಂಬಾರು, ಅಡುಗೆಗೆ ಬಳಸುವ ತರಕಾರಿಗಳಲ್ಲಿ ಕೊಳೆತು ಹುಳು ಬಿದ್ದಿದ್ದವು. ಗುಣಮಟ್ಟವಿಲ್ಲದ ಸಾಂಬಾರ ಪದಾರ್ಥ, ಬೇಳೆ, ಅಕ್ಕಿ ಮತ್ತು ಅಡುಗೆ ಸಾಮಗ್ರಿಗಳನ್ನ ಕಂಡು ಅಡುಗೆ ಸಿಬ್ಬಂದಿ ಮೇಲೆ ಕೆಂಡಾಮಂಡಲವಾದರು.
‘ಕೊಳೆತು ಹುಳುಬಿದ್ದಿದ್ದ ತರಕಾರಿ, ಸುರಕ್ಷಿತ ಇಲ್ಲದ ವಸತಿ ಕೊಠಡಿಗಳನ್ನು ತೋರಿಸಿ ನಿಮ್ಮ ಮಕ್ಕಳಿಗೆ ಇಂತಹ ಊಟ, ಇಂತಹ ವಸತಿ ಕೊಠಡಿಗಳನ್ನು ಕೊಡ್ತೀರಾ? ಎಂದು ಪ್ರಶ್ನಿಸಿದರು.
ಒಮ್ಮೆಯೂ ಭೇಟಿ ನೀಡದ ಮೇಲಧಿಕಾರಿಗೆ ಗರಂ
ಆಗಸ್ಟ್ ತಿಂಗಳಿನಲ್ಲಿ ನಾನು ಭೇಟಿ ನೀಡಿ ಪರಿಶೀಲಿಸಿದ್ದೇನೆ. ಇಂದೂ ಪುಸ್ತಕ ಪರಿಶೀಲಿಸಿದ್ದೇನೆ ಒಮ್ಮೆಯಾದರೂ ಗ್ರಾಮೀಣ ಭಾಗದ ವಸತಿ ಶಾಲೆಗಳಿಗೆ ಭೇಟಿ ನೀಡಿದ್ದೀರಾ. ಕೇವಲ ನಗರಗಳಲ್ಲಿಯೇ ಆರಾಮಾಗಿ ಇದ್ದುಬಿಡಬೇಡಿ. ಹಳ್ಳಿಯ ಮಕ್ಕಳನ್ನೂ ಗಮನಿಸಿ. ಅವರಿಗೂ ಉತ್ತಮ ಶಿಕ್ಷಣ, ಸೌಲಭ್ಯ ಒದಗಿಸಲು ಸರ್ಕಾರ ಸಾಕಷ್ಟು ಖರ್ಚು ಮಾಡುತ್ತಿದೆ ಅದನ್ನ ಅವರಿಗೆ ತಲುಪಿಸಿ’ ಎಂದು ಮೇಲಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಎರಡೂ ದಿನ ಒಂದೇ ಸಾಂಬರ್
ಶಾಲೆಯಲ್ಲಿ ಕಳೆದ ಭಾನುವಾರ ಮಾಡಿದ್ದ ಮಾಂಸಾಹಾರ ಸಾಂಬಾರ್ ಅನ್ನು ಸೋಮವಾರವೂ ಬಡಿಸಿದ್ದರೂ ಎನ್ನಲಾಗಿದ್ದು, ವಿದ್ಯಾರ್ಥಿನಿಯರು ಮಂಗಳವಾರ ಸಂಜೆ ಊಟ ಸೇವಿಸಿದ ಬಳಿಕ ಹಲವರಲ್ಲಿ ಹೊಟ್ಟೆನೋವು ಕಾಣಿಸಿಕೊಂಡಿದೆ. ಅವರಿಗೆ ರಾತ್ರಿಯೇ ಔಷಧೋಪಚಾರ ಮಾಡಲಾಗಿತ್ತು. ನಂತರ ಚೇತರಿಸಿಕೊಂಡಿದ್ದರು. ಬುಧವಾರ ಬೆಳಿಗ್ಗೆ ತಿಂಡಿಗೆ ಪುಳಿಯೋಗರೆ ಮಾಡಲಾಗಿತ್ತು. ಅನ್ನ ಸರಿಯಾಗಿ ಬೆಂದಿಲ್ಲದ ಹಾಗು ಹಿಂದಿನ ದಿನಗಳ ಅಡುಗೆಯಲ್ಲಿನ ವ್ಯತ್ಯಾಸದಿಂದ ಆಹಾರ ಸೇವಿಸಿದ್ದ ವಿದ್ಯಾರ್ಥಿಗಳಲ್ಲಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ ಭೇದಿ, ಹೊಟ್ಟೆನೋವು ಕಾಣಿಸಿಕೊಂಡಿದೆ. 6 ವಿದ್ಯಾರ್ಥಿನಿಯರನ್ನು ಮಾಯಕೊಂಡ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಉಳಿದವರನ್ನು ದಾವಣಗೆರೆಯ ಚಿಗಟೇರಿ ಜಿಲ್ಲಾಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ಕೊಡಿಸಲಾಗಿದೆ.
ಪೋಷಕರ ಆಕ್ರೋಶ
‘ವಿದ್ಯಾರ್ಥಿನಿಯರು ಅಸ್ವಸ್ಥರಾದ ಸುದ್ದಿ ತಿಳಿದ ಪೋಷಕರು ಶಾಲೆಗೆ ಧಾವಿಸಿದಾಗ ಪೋಷಕರ ಆಕ್ರೋಶ ಮುಗಿಲು ಮುಟ್ಟಿತ್ತು. ನಿಮ್ಮ ಮನೆ ಮಕ್ಕಳಿಗೆ ಈ ರೀತಿ ಅರೆ ಬೆಂದ ಅನ್ನ ನೀಡುತ್ತೀರಾ? ನೀವೇನು ನಿಮ್ಮ ಅಪ್ಪನ ಮನೆಯಿಂದ ತಂದು ಸಾಕುತ್ತಿದ್ದೀರಾ? ನಮ್ಮ ಮಕ್ಕಳಿಗೆ ಏನಾದರೂ ಆದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ. ನಮ್ಮ ಶಾಪ ನಿಮ್ಮನ್ನ ಸುಮ್ಮನೆ ಬಿಡುವುದಿಲ್ಲ’ ಎಂದು ಪೋಷಕರು ಶಾಪ ಹಾಕಿದರು.
ಅಧಿಕಾರಿಗಳೊಂದಿಗೆ ಸಭೆ
ಶಾಲೆಗೆ ಭೇಟಿ ನೀಡಿದ ಶಾಸಕ ಕೆ.ಎಸ್.ಬಸವಂತಪ್ಪ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
‘ತನಿಖೆ ನಡೆಸಿ ಸಂಬಂಧಪಟ್ಟವರ ಮೇಲೆ ಅಗತ್ಯ ಕ್ರಮ ಕೈಗೊಳ್ಳಿ. ಅಡುಗೆ ಸಿಬ್ಬಂದಿಯನ್ನು ಬದಲಾಯಿಸಿ’ ಎಂದು ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಉಪವಿಭಾಗಾಧಿಕಾರಿ ದುರ್ಗಾಶ್ರೀ, ಎಎಸ್ಪಿ ಆರ್.ಬಿ. ಬಸರಗಿ, ತಹಶೀಲ್ದಾರ್ ಎಂ.ಬಿ. ಅಶ್ವತ್ಥ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಜಿ.ಡಿ. ರಾಘವನ್, ಡಿಎಚ್ಒ ಷಣ್ಮುಖಪ್ಪ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ್, ಮಾಯಕೊಂಡ ಪಿಎಸ್ಐ ಅಜ್ಜಪ್ಪ, ಮುಖಂಡರಾದ ಬಿ.ಟಿ. ಹನುಮಂತಪ್ಪ, ಮರಿಯಾಚಾರ್, ಪ್ರತಾಪ್, ಡಾ. ನಾಗೇಂದ್ರಪ್ಪ, ವೆಂಕಟೇಶ್, ಜಿ.ಬಿ. ಮಲ್ಲೇಶ್ ಸ್ಥಳಕ್ಕೆ ಭೇಟಿ ನೀಡಿದ್ದರು.
ವಾರ್ಡನ್ ಬದಲಾಯಿಸಲು ಸೂಚನೆ
ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಸುರೇಶ್ ಬಿ.ಇಟ್ನಾಳ್ ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿ ಸ್ವಚ್ಛತೆ ಕಾಪಾಡುವಂತೆ ಸೂಚಿಸಿದರು. ಅಲ್ಲದೇ ನಿರ್ಲಕ್ಷ್ಯ ವಹಿಸಿದ ವಸತಿ ಶಾಲೆಯ ವಾರ್ಡನ್ ಅವರನ್ನು ತಕ್ಷಣ ಬದಲಾಯಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಕೆ.ನಾಗರಾಜ್ ಅವರಿಗೆ ಸೂಚಿಸಿರು.
ಅರೆಬೆಂದ ಅರ್ಧಂಬರ್ಧ ಊಟ
‘ಮಂಗಳವಾರ ರಾತ್ರಿ ಊಟ ಮಾಡಿದೆವು. ಅನ್ನ ಸರಿಯಾಗಿ ಬೆಂದಿರಲಿಲ್ಲ. ಗಟ್ಟಿ ಇತ್ತು. ಅರ್ಧಂಬರ್ಧ ಊಟ ಮಾಡಿದೆವು. ರಾತ್ರಿಯೇ ಕೆಲವರಿಗೆ ಹೊಟ್ಟೆನೋವು ಬಂತು. ಅವರಿಗೆ ಹಾಸ್ಟೆಲ್ನಲ್ಲಿ ಇದ್ದ ಸ್ಟ್ಯಾಫ್ ನರ್ಸ್ ಮಾತ್ರೆಗಳನ್ನು ಕೊಟ್ಟಾಗಿ ಹೊಟ್ಟೆನೋವು ಕಡಿಮೆಯಾಯಿತು. ಬೆಳಿಗ್ಗೆ ಎದ್ದಾಗ ತಿಂಡಿ ತಿಂದಾಗ ಹೊಟ್ಟೆನೋವು ಬಂದಿತು. ಅಸ್ವಸ್ಥರಾದ ವಿದ್ಯಾರ್ಥಿನಿಯರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.