ಮಾಯಕೊಂಡ: ಗೃಹಲಕ್ಷ್ಮಿ ಯೋಜನೆಯ ಹಣ ಇನ್ನೂ ಬಂದಿಲ್ಲ, ಪಡಿತರ ಚೀಟಿಯಲ್ಲಿ ಯಜಮಾನಿ ಹೆಸರು ಬದಲಾವಣೆಗೆ ಕಚೇರಿಗೆ ಅಲೆದು ಸಾಕಾಗಿದೆ. ಬಹುಗ್ರಾಮ ಕುಡಿಯುವ ನೀರು ಯೋಜನೆಯಲ್ಲಿ ಸಮರ್ಪಕವಾಗಿ ನೀರು ವಿತರಣೆಯಾಗುತ್ತಿಲ್ಲ. ಉಪ್ಪಾರ ಹಟ್ಟಿ ಬಳಿ ರೈಲ್ವೆ ಬ್ರಿಡ್ಜ್ ಕೆಳಗೆ ನೀರು ಸರಾಗವಾಗಿ ಹರಿಯದೆ ನಿಂತು ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಅಧಿಕಾರಿಗಳು ಅಸಡ್ಡೆ ತೋರುತ್ತಿದ್ದಾರೆ. ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಮಂಜೂರಾಗಿದ್ದು, ನಿರ್ಮಾಣ ಕಾರ್ಯ ನನೆಗುದಿಗೆ ಬಿದ್ದಿದೆ...
ಹೀಗೆ ಹತ್ತು ಹಲವು ಸಮಸ್ಯೆಗಳನ್ನು ಕ್ಷೇತ್ರದ ಜನ ಶಾಸಕರ ಮುಂದೆ ಇಟ್ಟರು.
ಸೋಮವಾರ ಇಲ್ಲಿನ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಶಾಸಕ ಕೆ.ಎಸ್. ಬಸವಂತಪ್ಪ ಜನರ ಸಮಸ್ಯೆ ಆಲಿಸಿದರು.
ಬಳಿಕ ಮಾತನಾಡಿ, ‘ಇಲ್ಲಿ ಬಂದಿರುವ ಅರ್ಜಿಗಳು ಶೀಘ್ರವೇ ವಿಲೇವಾರಿ ಮಾಡಬೇಕು. ಅನಗತ್ಯ ಸತಾಯಿಸಿದರೆ ತೊಂದರೆ ಆಗುತ್ತದೆ. ಜನತಾ ದರ್ಶನ ಕಾಟಾಚಾರದ ಕಾರ್ಯಕ್ರಮ ಆಗಬಾರದು’ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಕಂದಾಯ ನಿರೀಕ್ಷಕ ಹಿರೇಗೌಡ್ರು ಸ್ವಾಗತಿಸಿದರು. ಪಿಡಿಒ ನಾಗರಾಜ್ ನಿರೂಪಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ ಮಲ್ಲಿಕಾರ್ಜುನ, ಉಪಾಧ್ಯಕ್ಷ ಬಸವರಾಜ, ನೂಡೆಲ್ ಅಧಿಕಾರಿ ಎಡಿಎಲ್ಆರ್ ಕಸ್ತೂರಿ, ಉಪ ತಹಶೀಲ್ದಾರ್ ಹಾಲೇಶಪ್ಪ, ಸಹಾಯಕ ಸಿಡಿಪಿಒ ನೇತ್ರಾವತಿ, ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸುನಿತಾ, ಪಿಡಿಒ ನಾಗರಾಜ್, ಆರ್ಎಫ್ಒ ದರ್ಶನ್, ಎಇಇ ಪುಟ್ಟಸ್ವಾಮಿ, ಬೆಸ್ಕಾಂ ಎಇಇ ತೀರ್ಥೇಶ್, ಎಡಿಎ ಶ್ರೀಧರಮೂರ್ತಿ, ಮುಖಂಡರಾದ ವೆಂಕಟೇಶ್, ಬಿ.ಟಿ.ಹನುಮಂತಪ್ಪ, ನಾಗೇಂದ್ರಪ್ಪ, ರುದ್ರೇಶ್ ಹಾಗೂ ಮಾಯಕೊಂಡ ಸೇರಿದಂತೆ ವಿವಿಧ ಗ್ರಾಮಗಳ ಗ್ರಾಮಸ್ಥರು ಮುಖಂಡರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.