ADVERTISEMENT

ಮಸ್ತಿಕರ್ ಕ್ರಿಕೆಟ್ ಅಕಾಡೆಮಿಗೆ ಮಯೂರ ಕಪ್

​ಪ್ರಜಾವಾಣಿ ವಾರ್ತೆ
Published 21 ಜನವರಿ 2021, 1:04 IST
Last Updated 21 ಜನವರಿ 2021, 1:04 IST
ದಾವಣಗೆರೆಯಲ್ಲಿ ಮಯೂರ ಕ‍ಪ್‌ ಗೆದ್ದ ಬಳ್ಳಾರಿಯ ಮಸ್ತಿಕರ್‌ ಕ್ರಿಕೆಟ್‌ ಅಕಾಡೆಮಿಯ ಹುಡುಗರಿಗೆ ಕಪ್‌ ವಿತರಿಸಲಾಯಿತು
ದಾವಣಗೆರೆಯಲ್ಲಿ ಮಯೂರ ಕ‍ಪ್‌ ಗೆದ್ದ ಬಳ್ಳಾರಿಯ ಮಸ್ತಿಕರ್‌ ಕ್ರಿಕೆಟ್‌ ಅಕಾಡೆಮಿಯ ಹುಡುಗರಿಗೆ ಕಪ್‌ ವಿತರಿಸಲಾಯಿತು   

ದಾವಣಗೆರೆ: ಮಕರ ಸಂಕ್ರಾಂತಿ ಪ್ರಯುಕ್ತ ನಗರದ ಮಯೂರ ಕ್ರಿಕೆಟ್ ಕ್ಲಬ್ ಆಯೋಜಿಸಿದ್ದ 16 ವರ್ಷದ ಒಳಗಿನ ಬಾಲಕರ ಲೆದರ್ ಬಾಲ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಬಳ್ಳಾರಿಯ ಡಾ.ಮಸ್ತಿಕರ್ ಕ್ರಿಕೆಟ್ ಅಕಾಡೆಮಿ ‘ಮಯೂರ ಕಪ್’ ಎತ್ತಿ ಹಿಡಿಯಿತು

ಬುಧವಾರ ಎಂಬಿಎ ಕಾಲೇಜಿನ ಟರ್ಫ್ ಅಂಗಳದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಮಸ್ತಿಕರ್ ತಂಡ ಚಿತ್ರದುರ್ಗದ ಮದಕರಿ ಕ್ರಿಕೆಟ್ ಅಕಾಡೆಮಿಯನ್ನು 5 ವಿಕೆಟ್‌ಗಳ ಅಂತರದಿಂದ ಮಣಿಸುವ ಮೂಲಕ ಜಯ ಸಾಧಿಸಿತು. ಸರಣಿ ಉದ್ದಕ್ಕೂ ಉತ್ತಮ ಪ್ರದರ್ಶನ ತೋರಿದ್ದ ಮದಕರಿ ಬಾಯ್ಸ್ ರನ್ನರ್‌ಅಪ್‌ಗೆ ಸಮಾಧಾನ ಪಡಬೇಕಾಯಿತು.

ಮೊದಲು ಬ್ಯಾಟಿಂಗ್ ಮಾಡಿದ ಚಿತ್ರದುರ್ಗ ಮದಕರಿ ತಂಡ 25 ಓವರ್‌ಗಳಲ್ಲಿ 117 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿತು. ತಂಡದ ಪರವಾಗಿ ದೈವಿಕ್ 62 ರನ್‌ ಗಳಿಸಿ ಮೊತ್ತ ನೂರರ ಗಡಿ ದಾಟುವಂತೆ ನೋಡಿಕೊಂಡರು.

ADVERTISEMENT

ಈ ಮೊತ್ತ ಬೆನ್ನತ್ತಿದ ಬಳ್ಳಾರಿಯ ಮಸ್ತಿಕರ್ ಬಾಯ್ಸ್ ಇನ್ನೂ 12 ಎಸೆತಗಳು ಬಾಕಿ ಇರುವಾಗಲೇ ಗುರಿ ತಲುಪಿದರು. ಲಕ್ಷ್ಮೀಸಾಗರ್ 36, ಮಹೇಂದರ್ 24 ಮತ್ತು ಸಂಜಯ್ ಅವರ 17 ರನ್‌ ಮಸ್ತಿಕರ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದವು.

ಸರಣಿ ಉದ್ದಕ್ಕೂ ಉತ್ತಮ ಬ್ಯಾಟಿಂಗ್ ಪ್ರದರ್ಶನ ಮಾಡಿ ಮೂರು ಶತಕಗಳೊಂದಿಗೆ 446 ರನ್ ಕಲೆ ಹಾಕಿರುವ ದಾವಣಗೆರೆ ಕ್ರಿಕೆಟ್ ಅಕಾಡೆಮಿಯ ತೌಫಿಕ್ ಅಹಮದ್ ಬೆಸ್ಟ್ ಬ್ಯಾಟ್ಸ್‌ಮನ್, 14 ವಿಕೆಟ್ ಉರುಳಿಸಿದ ಚಿತ್ರದುರ್ಗದ ಮದಕರಿ ಅಕಾಡೆಮಿಯ ಅದ್ವೆರ್ಯ್ ಸಾಯಿ ಬೆಸ್ಟ್ ಬೌಲರ್, 11 ವಿಕೆಟ್ ಪಡೆದು 185 ರನ್ ಗಳಿಸಿದ ಚಿತ್ರದುರ್ಗದ ಪ್ರೀತಂ ಬೆಸ್ಟ್ ಆಲ್‌ರೌಂಡರ್ ಮತ್ತು ದಾವಣಗೆರೆ ಯುನೈಟೆಡ್ ಅಕಾಡೆಮಿಯ ಅಂಬರೀಷ್ ಬೆಸ್ಟ್ ಫೀಲ್ಡರ್ ಪ್ರಶಸ್ತಿಗೆ ಭಾಜನರಾದರು.

ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ದಾವಣಗೆರೆ ಯುನೈಟೆಡ್ ಬಾಲಕರು ಆತಿಥೇಯ ದಾವಣಗೆರೆ ಕ್ರಿಕೆಟ್ ಕ್ಲಬ್ ಅಕಾಡೆಮಿ ಹುಡುಗರ ವಿರುದ್ಧ ಜಯಗಳಿಸಿ ಟೂರ್ನಿಯಲ್ಲಿ ಮೂರನೇ ಸ್ಥಾನ ಪಡೆದರು.

ಆರಂಭಿಕವಾಗಿ ಬ್ಯಾಟಿಂಗ್ ಮಾಡಿದ ಯುನೈಟೆಡ್ ತಂಡದ ಬಾಲಕರು 25 ಓವರ್‌ಗಳಲ್ಲಿ 150 ರನ್ ಪೇರಿಸಿದರು. ದಾವಣಗೆರೆ ಅಕಾಡೆಮಿ ಹುಡುಗರು 140 ರನ್‌ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡು 10 ರನ್‌ಗಳ ಅಂತರದ ಸೋಲು ಕಂಡು ನಾಲ್ಕನೆ ಸ್ಥಾನಕ್ಕೆ ತೃಪ್ತಿಪಟ್ಟರು.

ಸಂಜೆ ನಡೆದ ಬಹುಮಾನ ವಿತರಣ ಕಾರ್ಯಕ್ರಮದಲ್ಲಿ ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಪಾಲಿಕೆ ವಿರೋಧ ಪಕ್ಷದ ನಾಯಕ ಎ. ನಾಗರಾಜ್, ಎಲ್.ಎಂ. ಪ್ರಕಾಶ್, ಕೆ. ಶಶಿಧರ್, ಹುಚ್ಚವ್ವನಹಳ್ಳಿ ಮಂಜುನಾಥ್, ಪತ್ರಕರ್ತ ನವೀನ್, ಮೋಹನ್‌ರಾವ್, ಬಸವರಾಜ್, ತಿಮ್ಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.