ADVERTISEMENT

ಆಧುನಿಕ ವೈದ್ಯ ವಿಜ್ಞಾನದ ವಿರುದ್ಧ ಹೇಳಿಕೆ: ರಾಮದೇವ್ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2021, 15:03 IST
Last Updated 4 ಜೂನ್ 2021, 15:03 IST
ಬಾಬಾ ರಾಮದೇವ್‌ ಹೇಳಿಕೆ ಖಂಡಿಸಿ ಮೆಡಿಕಲ್‌ ಸರ್ವೀಸ್‌ ಸೆಂಟರ್‌ (ಎಂ.ಎಸ್‌.ಸಿ) ಕರೆ ನೀಡಿರುವ ಪ್ರತಿಭಟನಾ ಸಪ್ತಾಹದಲ್ಲಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ಡಾ.ವಸುಧೇಂದ್ರ ಎನ್. ಪಾಲ್ಗೊಂಡಿದ್ದರು.
ಬಾಬಾ ರಾಮದೇವ್‌ ಹೇಳಿಕೆ ಖಂಡಿಸಿ ಮೆಡಿಕಲ್‌ ಸರ್ವೀಸ್‌ ಸೆಂಟರ್‌ (ಎಂ.ಎಸ್‌.ಸಿ) ಕರೆ ನೀಡಿರುವ ಪ್ರತಿಭಟನಾ ಸಪ್ತಾಹದಲ್ಲಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ಡಾ.ವಸುಧೇಂದ್ರ ಎನ್. ಪಾಲ್ಗೊಂಡಿದ್ದರು.   

ದಾವಣಗೆರೆ: ಬಾಬಾ ರಾಮದೇವ್‌ ಅವರು ಆಧುನಿಕ ವೈದ್ಯಕೀಯ ವಿಜ್ಞಾನದ ವಿರುದ್ಧ ಹೇಳಿಕೆ ನೀಡಿರುವುದು ಹಾಗೂ ಕೋವಿಡ್‌ ವಾರಿಯರ್‌ಗಳ ಮೇಲೆ ಹಲ್ಲೆ ನಡೆಯುತ್ತಿರುವುದನ್ನು ಖಂಡಿಸಿ ಮೆಡಿಕಲ್‌ ಸರ್ವೀಸ್‌ ಸೆಂಟರ್‌ (ಎಂ.ಎಸ್‌.ಸಿ) ಆಶ್ರಯದಲ್ಲಿ ಪ್ರತಿಭಟನಾ ಸಪ್ತಾಹ ಆರಂಭಗೊಂಡಿತು.

ಮೆಡಿಕಲ್‌ ಸರ್ವೀಸ್‌ ಸೆಂಟರ್‌ನ ಕೇಂದ್ರ ಸಮಿತಿಯು ಪ್ರತಿಭಟನಾ ಸಪ್ತಾಯಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ವೈದ್ಯರು, ನರ್ಸಿಂಗ್‌ ಸಿಬ್ಬಂದಿ, ಪ್ಯಾರಾಮೆಡಿಕಲ್‌ ಸಿಬ್ಬಂದಿ ಆನ್‌ಲೈನ್‌ ಮೂಲಕ ಪ್ರತಿಭಟಿಸಿದರು.

ಅವೈಜ್ಞಾನಿಕ ವೈದ್ಯಕೀಯ ಚಿಕಿತ್ಸೆ ಮತ್ತು ಚಿಂತನೆಗಳಿಗೆ ಕುಮ್ಮಕ್ಕು ನೀಡುವ ಪ್ರವೃತ್ತಿ ಹೆಚ್ಚುತ್ತಿದೆ. ಇದಕ್ಕೆ ಸರ್ಕಾರವೂ ಪ್ರೋತ್ಸಾಹ ನೀಡುತ್ತಿದೆ. ಇಂಥ ಬೆಳವಣಿಗೆಗಳು ಕೋವಿಡ್‌ ವಿರುದ್ಧ ಗೆಲ್ಲಲು ಅಡ್ಡಿಯಾಗುತ್ತಿದೆ. ಹಗಲು–ರಾತ್ರಿ ಎನ್ನದೇ ಕೆಲಸ ಮಾಡುತ್ತಿರುವ ಆಧುನಿಕ ವೈದ್ಯಕೀಯ ಸಿಬ್ಬಂದಿ ಹಾಗೂ ಚಿಕಿತ್ಸಾ ವಿಧಾನದ ಬಗ್ಗೆ ದುರುದ್ದೇಶಪೂರಿತ ಅಭಿಯಾನವನ್ನು ನಡೆಸುತ್ತಿರುವ ರಾಮದೇವ್‌ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಆಧುನಿಕ ವೈದ್ಯಕೀಯ ವಿಜ್ಞಾನದ ವಿರುದ್ಧದ ಸುಳ್ಳು ಪ್ರಚಾರವನ್ನು ನಿಲ್ಲಿಸಬೇಕು. ರಾಮದೇವ್‌ ಅವರನ್ನು ಬಂಧಿಸಿ ಕಠಿಣ ಕ್ರಮ ತೆಗೆದುಕೊಳ್ಳಬೇಕು. ವೈದ್ಯಕೀಯ ಸಿಬ್ಬಂದಿ, ಕೋವಿಡ್‌ ವಾರಿಯರ್‌ಗಳ ಮೇಲಾಗುವ ಹಲ್ಲೆಗಳನ್ನು ತಡೆಯಬೇಕು. ತಪ್ಪಿತಸ್ಥರಿಗೆ ನಿದರ್ಶನೀಯ ಶಿಕ್ಷೆ ವಿಧಿಸಬೇಕು. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಿ, ಎಲ್ಲರಿಗೂ ಉಚಿತವಾಗಿ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ಖಾತ್ರಿಪಡಿಸಬೇಕು ಎಂದು ಹಕ್ಕೊತ್ತಾಯ ಮಂಡಿಸಿದರು.

ರಾಜ್ಯದಲ್ಲಿ ಪ್ರತಿಭಟನೆಯ ನೇತೃತ್ವವನ್ನು ಎಂ.ಎಸ್‌.ಸಿ ರಾಜ್ಯ ಕಾರ್ಯದರ್ಶಿ ಡಾ.ವಸುಧೇಂದ್ರ ಎನ್. ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.