ದಾವಣಗೆರೆ: ತಾಲ್ಲೂಕಿನ ಮಲ್ಲಶೆಟ್ಟಿಹಳ್ಳಿಯಲ್ಲಿ ಒತ್ತುವರಿ ಮಾಡಿಕೊಂಡಿರುವ ಜಮೀನನ್ನು ವಶಕ್ಕೆ ಪಡೆದು, ನಕಾಶೆಯಲ್ಲಿರುವಂತೆ 30 ಅಡಿ ಅಗಲವಾಗಿರುವ ಜಿಲ್ಲಾ ಮುಖ್ಯ ರಸ್ತೆಯನ್ನಾಗಿ ಅಭಿವೃದ್ಧಿಗೊಳಿಸಬೇಕು ಎಂದು ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ರಾಜ್ಯ ಅಧ್ಯಕ್ಷ ಎಚ್.ಜಿ. ಉಮೇಶ್ ಒತ್ತಾಯಿಸಿದರು.
ಉಪ ತಹಶೀಲ್ದಾರ್ ದೇವರಾಜ್ ಅವರಿಗೆ ಮಂಗಳವಾರ ಈ ಬಗ್ಗೆ ಮನವಿ ಸಲ್ಲಿಸಿದ ಉಮೇಶ್, ‘ಮಲ್ಲಶೆಟ್ಟಿಹಳ್ಳಿ ಸರ್ವೆ ನಂಬರ್ 5, 7, 8ರಲ್ಲಿ ನಕಾಶೆಯಲ್ಲಿರುವ ರಸ್ತೆಗೆ ತಾಗಿಕೊಂಡಿರುವ ಜಮೀನನ್ನು ಒತ್ತುವರಿ ಮಾಡಲಾಗಿದೆ. ಇದನ್ನು ತೆರವುಗೊಳಿಸಿ 30 ಅಡಿ ಜಿಲ್ಲಾ ರಸ್ತೆಯನ್ನಾಗಿ ನಿರ್ಮಿಸಲು ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ಈ ರಸ್ತೆ ಅಭಿವೃದ್ಧಿಗೊಳಿಸಿದರೆ ಮಲ್ಲಶೆಟ್ಟಿಹಳ್ಳಿ ಗ್ರಾಮದಿಂದ ಮುಂದೆ ಕುರ್ಕಿ, ಹನುಮನಹಳ್ಳಿ, ಈಚಗಟ್ಟ, ಕರೇಲಕ್ಕೇನಹಳ್ಳಿ ಸೇರಿ ಇತರೆ ಗ್ರಾಮಗಳಿಗೆ ರಸ್ತೆ ಸಂಪರ್ಕ ಕಲ್ಪಿಸಿದಂತಾಗಲಿದೆ. ಇದೇ ಮಾರ್ಗದಲ್ಲಿರುವ ಉದ್ಯಮಗಳಿಗೆ ಹೋಗಲೂ ಅನುಕೂಲವಾಗಲಿದೆ. ಎಸ್.ಸಿ., ಎಸ್.ಟಿ. ಜನಾಂಗದ ಕಾಲೊನಿ, ಶ್ರಮಿಕರಿಗಾಗಿಯೇ ನಿರ್ಮಿಸಿರುವ ಶ್ರಮಜೀವಿ ಪಂಪಾಪತಿ ಕಟ್ಟಡ ಕಾರ್ಮಿಕರ ಬಡಾವಣೆ ಇದೆ. ಈ ಭಾಗದ ಜನರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಕೋರಿದರು.
‘ಒತ್ತುವಾರಿ ಮಾಡಿಕೊಂಡಿರುವ ಜಾಗವನ್ನು ವಶಕ್ಕೆ ಪಡೆದು, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಸಂಸದರು ಅಥವಾ ಶಾಸಕರ ಅನುದಾನದಿಂದ ಸಿಮೆಂಟ್ ರಸ್ತೆಯನ್ನಾಗಿ ಅಭಿವೃದ್ಧಿಗೊಳಿಸಬೇಕು’ ಎಂದು ಆಗ್ರಹಿಸಿದರು.
ರೈತ ಮುಖಂಡ ಅಂಜಿನಪ್ಪ ಪೂಜಾರ, ಪಾಮೇನಹಳ್ಳಿ ಮಂಜುನಾಥ್ ಈ ಸಂದರ್ಭದಲ್ಲಿ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.