ದಾವಣಗೆರೆ: ‘ಅತೃಪ್ತ ಶಾಸಕರ ಜತೆ ಸೇರಿಲ್ಲ. ಸಚಿವ ಸ್ಥಾನ ಸಿಗದ ವಂಚಿತ ಬಿಜೆಪಿ ಶಾಸಕರ ಸಭೆಯಲ್ಲಿ ನಾನು ಭಾಗವಹಿಸಿಲ್ಲ. ಈ ಕುರಿತು ಪತ್ರಿಕೆಗಳಲ್ಲಿ ಬಂದ ವರದಿ ಸತ್ಯಕ್ಕೆ ದೂರ’ ಎಂದು ಮಾಯಕೊಂಡ ಶಾಸಕ ಪ್ರೊ. ಎನ್. ಲಿಂಗಣ್ಣ ಸ್ಪಷ್ಟಪಡಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅತೃಪ್ತ ಶಾಸಕರು ಗುರುವಾರ ಸಭೆ ನಡೆಸಿದ್ದು, ಅದರಲ್ಲಿ ನಾನು ಭಾಗವಹಿಸಿದ್ದೆ ಎಂದು ವರದಿಯಾಗಿದೆ. ನಾನು ಯಾವುದೇ ಸಭೆಯಲ್ಲಿ ಭಾಗವಹಿಸಿಲ್ಲ. ನಾನು ಎಂದಿಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ದ್ರೋಹ ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ. ಯಡಿಯೂರಪ್ಪ ನನಗೆ ತಂದೆ ಸಮಾನ. ನನ್ನ ರಾಜಕೀಯ ಗುರು. ಯಾವುದೇ ಅತೃಪ್ತ ಶಾಸಕರ ಜತೆ ಸೇರಿಲ್ಲ. ಸೇರುವುದೂ ಇಲ್ಲ’ ಎಂದು ಹೇಳಿದರು.
‘ನನ್ನ ಕ್ಷೇತ್ರದ ಮತದಾರರು ಗೆಲ್ಲಿಸಿದ್ದಾರೆ. ಅವರಿಗೆ ದ್ರೋಹ ಮಾಡುವುದಿಲ್ಲ. ಯಾವುದೇ ಕಾರಣಕ್ಕೂ ಪಕ್ಷದ ವಿರುದ್ಧ ಹೋಗುವುದಿಲ್ಲ. ಯಡಿಯೂರಪ್ಪ ನನಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ಅದು ಸಾಕು. ದಾವಣಗೆರೆ ಜಿಲ್ಲೆಗೆ ಸಚಿವ ಸ್ಥಾನ ನೀಡಬೇಕು ಎಂಬ ಒತ್ತಾಯಕ್ಕೆ ನನ್ನ ಬೆಂಬಲ ಇದೆ. ಆದರೆ ನನಗೆ ಸಚಿವ ಸ್ಥಾನ ಬೇಕಿಲ್ಲ. ಕೆಟ್ಟ ರಾಜಕಾರಣ ಮಾಡುವುದಿಲ್ಲ. ನಾನು ಯಾವುದೇ ಗುಂಪಿನ ಜತೆ ಗುರುತಿಸಿಕೊಂಡಿಲ್ಲ. ಯಡಿಯೂರಪ್ಪ, ಪಕ್ಷ ನನ್ನ ಮೇಲೆ ನಂಬಿಕೆ ಇಟ್ಟಿದೆ. ಅದನ್ನು ಉಳಿಸಿಕೊಳ್ಳುತ್ತೇನೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.