ADVERTISEMENT

ಮೊಬೈಲ್‌ ಟವರ್‌ ಬ್ಯಾಟರಿ ಕಳವು: ಆರೋಪಿಗಳ ಸೆರೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2018, 15:34 IST
Last Updated 8 ಡಿಸೆಂಬರ್ 2018, 15:34 IST
ಮೊಬೈಲ್‌ ಟವರ್‌ ಬ್ಯಾಟರಿ ಕಳವು ಮಾಡುತ್ತಿದ್ದ ಜಬೀವುಲ್ಲಾ ಮತ್ತು ಗಣೇಶ್‌
ಮೊಬೈಲ್‌ ಟವರ್‌ ಬ್ಯಾಟರಿ ಕಳವು ಮಾಡುತ್ತಿದ್ದ ಜಬೀವುಲ್ಲಾ ಮತ್ತು ಗಣೇಶ್‌   

ದಾವಣಗೆರೆ: ಹಾವೇರಿ ಮತ್ತು ದಾವಣಗೆರೆ ಜಿಲ್ಲೆಯಲ್ಲಿ ಮೊಬೈಲ್‌ ಟವರ್‌ಗಳ ಬ್ಯಾಟರಿ ಕಳವು ಮಾಡುತ್ತಿದ್ದ ಆರೋಪಿಗಳಿಬ್ಬರನ್ನು ಹೊನ್ನಾಳಿ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೆಕಲ್ಲು ತಾಲ್ಲೂಕು ಬಳೆಗಾರನಹಳ್ಳಿಯಲ್ಲಿ ಜಿಒ ಕಂಪನಿಯಲ್ಲಿ ಎಲೆಕ್ಟ್ರಿಷಿನ್‌ ಆಗಿರುವ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ಕುಸಗೂರು ಗ್ರಾಮದ ಡಿ.ಇ. ಗಣೇಶ್‌, ಹಾವೇರಿ ಜಿಲ್ಲೆ ರಟ್ಟಿಹಳ್ಳಿ ಮುಲ್ಲಾ ಓಣಿ ನಿವಾಸಿ, ಚಾಲಕವೃತ್ತಿಯ ಜಬೀವುಲ್ಲಾ ಬಂಧಿತ ಆರೋಪಿಗಳು.

ಟವರ್‌ ಬ್ಯಾಟರಿ ಕಳವಿಗೆ ಸಂಬಧಿಸಿದಂತೆ ಹೊನ್ನಾಳಿ ಪೊಲೀಸ್‌ ಠಾಣೆಯಲ್ಲಿ 3, ನ್ಯಾಮತಿ ಠಾಣೆಯಲ್ಲಿ 1 ಹಾಗೂ ಚನ್ನಗಿರಿ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿತ್ತು.

ADVERTISEMENT

ವಿಶೇಷ ತನಿಖಾ ತಂಡವು ಆರೋಪಿಗಳನ್ನು ಬಂಧಿಸಿದಾಗ ಜಿಲ್ಲೆಯ ಐದು ಪ್ರಕರಣಗಳಲ್ಲದೆ, ಹಾವೇರಿ ಜಿಲ್ಲೆಯ 8 ಕಡೆ ಬ್ಯಾಟರಿ ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಆರೋಪಿಗಳಿಂದ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ₹ 13.29 ಲಕ್ಷ ಮೌಲ್ಯದ 97 ಬ್ಯಾಟರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಳಿದ 11 ಪ್ರಕರಣಗಳ ಬ್ಯಾಟರಿಗಳನ್ನು ಹುಬ್ಬಳ್ಳಿಯಲ್ಲಿ ಗುಜರಿಗೆ ಮಾರಾಟ ಮಾಡಿದ್ದಾರೆ.

ಎಸ್‌ಪಿ ಆರ್‌. ಚೇತನ್‌ ಮಾರ್ಗದರ್ಶನದಲ್ಲಿ ಹೊನ್ನಾಳಿ ಇನ್‌ಸ್ಪೆಕ್ಟರ್‌ ಬ್ರಿಜೇಶ್ ಮ್ಯಾಥ್ಯು ಮತ್ತು ಸಬ್‌ ಇನ್‌ಸ್ಪೆಕ್ಟರ್‌ ಎನ್‌.ಸಿ. ಕಾಡದೇವರ ನೇತೃತ್ವದ ತನಿಖಾ ತಂಡದಲ್ಲಿ ಸಿಬ್ಬಂದಿ ಫೈರೂಜ್‌ಖಾನ್‌, ವೆಂಕಟರಮಣ, ಸಿದ್ದನಗೌಡ, ಜಗದೀಶ, ರಾಘವೇಂದ್ರ, ತಾಂತ್ರಿಕ ಸಿಬ್ಬಂದಿ ರಾಮಚಂದ್ರ ಜಾಧವ್‌ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.