ADVERTISEMENT

ಬಹುತೇಕ ಯುವಜನರಿಗೆ ಗುರಿ ಇಲ್ಲ

ಕನ್ನಡ ಕೀರ್ತಿ ಕಳಸ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿದ ಬಸವಪ್ರಭು ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2020, 3:59 IST
Last Updated 23 ನವೆಂಬರ್ 2020, 3:59 IST
ದಾವಣಗೆರೆಯಲ್ಲಿ ಸಿದ್ಧಗಂಗಾ ಶಾಲೆಯಲ್ಲಿ ಕಲಾಕುಂಚದ ಅಂಗಸಂಸ್ಥೆ ಸಮಾನ ಮನಸ್ಕರ ಸೇವಾ ಸಮಿತಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಉದ್ಘಾಟಿಸಿದರು
ದಾವಣಗೆರೆಯಲ್ಲಿ ಸಿದ್ಧಗಂಗಾ ಶಾಲೆಯಲ್ಲಿ ಕಲಾಕುಂಚದ ಅಂಗಸಂಸ್ಥೆ ಸಮಾನ ಮನಸ್ಕರ ಸೇವಾ ಸಮಿತಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಉದ್ಘಾಟಿಸಿದರು   

ದಾವಣಗೆರೆ: ಮುಂದೇನಾಗಬೇಕು ಎಂದು ಸಣ್ಣ ಮಕ್ಕಳನ್ನು ಜಿಲ್ಲಾಧಿಕಾರಿ, ವೈದ್ಯ, ಎಂಜಿನಿಯರ್‌ ಆಗಬೇಕು ಎನ್ನುತ್ತಾರೆ. ಎಸ್ಸೆಸ್ಸೆಲ್ಸಿ, ಪಿಯು ಆದ ಮಕ್ಕಳಿಗೆ ಕೇಳಿದರೆ ಪರೀಕ್ಷೆ ಬರಲಿ. ಮುಂದೆ ನೋಡೋಣ ಎನ್ನುತ್ತಾರೆ. ಯುವಜನರು ಸ್ಪಷ್ಟ ಗುರಿಗಳಿಲ್ಲದೇ ಮೋಜು ಮಸ್ತಿ ಕಡೆ ಆಕರ್ಷಣೆಗೆ ಒಳಗಾಗುತ್ತಿದ್ದಾರೆ ಎಂದು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಹೇಳಿದರು.

ಸಮಾನ ಮನಸ್ಕರ ಸೇವಾ ಸಮಿತಿಯ ಪ್ರಥಮ ವಾರ್ಷಿಕೋತ್ಸವ, ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿಯಲ್ಲಿ ಕನ್ನಡದಲ್ಲಿ 125ಕ್ಕೆ 125 ಅಂಕ ಗಳಿಸಿದ ದಾವಣಗೆರೆಯ ವಿದ್ಯಾರ್ಥಿಗಳಿಗೆ ‘ಕನ್ನಡ ಕೀರ್ತಿ ಕಳಸ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಒಂದು ಮನೆ ಕಟ್ಟಬೇಕಿದ್ದರೆ ಅದಕ್ಕೊಂದು ಯೋಜನೆ, ನಕ್ಷೆ ಇರಬೇಕು. ಅದೇ ರೀತಿ ಬದುಕಿನಲ್ಲಿ ಮಹತ್ವದ ಸಾಧನೆ ಮಾಡಬೇಕಿದ್ದರೆ ಒಂದು ಗುರಿ ಇರಬೇಕು. ಈಗಿನ ಯುವಜನರು ಕ್ರಿಕೆಟ್‌ ಮತ್ತು ಸಿನಿಮಾ ತಾರೆಗಳ ಫೋಟೊಗಳನ್ನು ಅಂಟಿಸಿಕೊಂಡು ತಿರುಗಾಡುತ್ತಿದ್ದಾರೆ ಎಂದು ವಿಷಾದಿಸಿದರು.

ADVERTISEMENT

ಜೀವನದಲ್ಲಿ ಸಾಧನೆ ಮಾಡಬೇಕಿದ್ದರೆ ನಮ್ಮ ವ್ಯಕ್ತಿತ್ವ ಒಳ್ಳೆಯದಾಗಿರಬೇಕು. ಅದಕ್ಕೆ ಒಳ್ಳೆಯ ಚಿಂತನೆ ಅಳವಡಿಸಿಕೊಂಡಿರಬೇಕು. ನಾಲ್ಕು ಜನರಿಗೆ ಒಳ್ಳೆಯದನ್ನು ಮಾಡುವ ಮನಸ್ಸು ಇರಬೇಕು. ವಿದ್ಯಾರ್ಥಿ ಜೀವನ ಸುಂದರ ಅನ್ನಿಸಬೇಕಿದ್ದರೆ ಭವಿಷ್ಯದಲ್ಲಿ ಸಾಧನೆ ಮಾಡಿ ಸಾರ್ಥಕತೆ ಪಡೆದಿರಬೇಕು ಎಂದು ತಿಳಿಸಿದರು.

ಸಿದ್ಧಗಂಗಾ ವಿದ್ಯಾಸಂಸ್ತೆಯ ಮುಖ್ಯಸ್ಥೆ ಜಸ್ಟಿನ್‌ ಡಿಸೋಜ, ಸಮಾನ ಮನಸ್ಕರ ಸೇವಾ ಸಮಿತಿಯ ಅಧ್ಯಕ್ಷ ಅಬ್ದುಲ್‌ ಸತ್ತಾರ್‌ ಸಾಹೇಬ್‌, ಪ್ರಧಾನ ಕಾರ್ಯದರ್ಶಿ ಸಾಲಿಗ್ರಾಮ ಗಣೇಶ್‌ ಶೆಣೈ, ಅಧ್ಯಕ್ಷ ಕೆ.ಎಚ್‌. ಮಂಜುನಾಥ, ಹಿರಿಯ ಪತ್ರಕರ್ತ ಬಕ್ಕೇಶ್‌ ನಾಗನೂರು, ಬಿ. ಲೋಕೇಶ್‌ ಕುರುಬರಹಳ್ಳಿ, ಟಿ. ಅಜ್ಜೇಶಿ, ವಿಜಯಕುಮಾರ್‌ ಶೆಟ್ಟಿ, ಶೈಲಾ ವಿಜಯಕುಮಾರ್‌, ಚಂದ್ರಮ್ಮ ಕೆ.ಎಂ. ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.