ADVERTISEMENT

ತೇಜಸ್ವಿನಿ ತವರು ಮನೆಯಲ್ಲಿ ಮಡುಗಟ್ಟಿದ ಮೌನ

ಮೆಟ್ರೊ ಕಾಮಗಾರಿ ವೇಳೆ ತೇಜಸ್ವಿನಿ ಸಾವು

​ಪ್ರಜಾವಾಣಿ ವಾರ್ತೆ
Published 11 ಜನವರಿ 2023, 6:22 IST
Last Updated 11 ಜನವರಿ 2023, 6:22 IST
ದಾವಣಗೆರೆಯ ನಿವಾಸದಲ್ಲಿ ತೇಜಸ್ವಿನಿ ಅವರ ಕುಟುಂಬದವರು ರೋದಿಸಿದರು (ಎಡಚಿತ್ರ). ಬೆಂಗಳೂರಿನ ನಿವಾಸದಲ್ಲಿ ಮಕ್ಕಳ ಜನ್ಮದಿನದ ವೇಳೆ ತೇಜಸ್ವಿನಿ ಹಾಗೂ ಪತಿ ಲೋಹಿತ್ ಕುಮಾರ್. –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆಯ ನಿವಾಸದಲ್ಲಿ ತೇಜಸ್ವಿನಿ ಅವರ ಕುಟುಂಬದವರು ರೋದಿಸಿದರು (ಎಡಚಿತ್ರ). ಬೆಂಗಳೂರಿನ ನಿವಾಸದಲ್ಲಿ ಮಕ್ಕಳ ಜನ್ಮದಿನದ ವೇಳೆ ತೇಜಸ್ವಿನಿ ಹಾಗೂ ಪತಿ ಲೋಹಿತ್ ಕುಮಾರ್. –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರೆ: ಮೆಟ್ರೊ ಪಿಲ್ಲರ್‌ನ ಕಬ್ಬಿಣದ ಚೌಕಟ್ಟು ಉರುಳಿ ಮೃತಪಟ್ಟಿರುವ ಜಿ.ಎಂ. ತೇಜಸ್ವಿನಿ (28) ಅವರ ದಾವಣಗೆರೆಯ ತವರು ಮನೆಯಲ್ಲಿ ಮಂಗಳವಾರ ದುಃಖದ ವಾತಾವರಣ ಮಡುಗಟ್ಟಿತ್ತು.

ಅವಘಡದ ಸುದ್ದಿ ತಿಳಿದು ತಂದೆ ಜಿ.ಮದನ್, ತಾಯಿ ರುಕ್ಷ್ಮಿಣಿ ಬಾಯಿ ಬೆಂಗಳೂರಿಗೆ ಧಾವಿಸಿದರು. ದೊಡ್ಡಪ್ಪಂದಿರಾದ ನಾರಾಯಣ ರಾವ್, ರಾಘವೇಂದ್ರ ರಾವ್ ಕುಟುಂಬದವರ ಕಣ್ಣಾಲಿ ತುಂಬಿದ್ದವು.

10 ದಿನದ ಹಿಂದೆಯಷ್ಟೇ ಇಲ್ಲಿನ ಬಸವೇಶ್ವರ ನಗರದ ತವರು ಮನೆಗೆ ತೇಜಸ್ವಿನಿ ಬಂದು ಹೋಗಿದ್ದರು.

ADVERTISEMENT

‘ಪರಿಹಾರ ಯಾರಿಗೆ ಬೇಕು? ಅವರಿಂದ (ಬಿಎಂಆರ್‌ಸಿಎಲ್) ಜೀವ ಕೊಡಲು ಆಗುತ್ತದೆಯೇ? ಘಟನೆಗೆ ಕಾರಣರಾದವರನ್ನು ಬಂಧಿಸಬೇಕು’ ಎಂದು ತೇಜಸ್ವಿನಿ ಅವರ ಸಹೋದರಿ ಭಾಗ್ಯ ಒತ್ತಾಯಿಸಿದರು.

ದೂರು ಪಡೆಯಲು ವಿಳಂಬಕ್ಕೆ ಆಕ್ರೋಶ: ‘ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದಿದ್ದ ಲೋಹಿತ್‌ ಕುಮಾರ್, ಅವಘಡ ಸಂಬಂಧ ದೂರು ನೀಡಲು ಗೋವಿಂದಪುರ ಠಾಣೆಗೆ ಹೋಗಿದ್ದರು. ದೂರು ಪಡೆಯಲು ವಿಳಂಬ ಮಾಡಿದ್ದ ಪೊಲೀಸರು, ಹಲವು ಗಂಟೆಗಳ ಕಾಲ ಠಾಣೆಯಲ್ಲಿ ಕೂರಿಸಿದ್ದರು’ ಎಂದು ತೇಜಸ್ವಿನಿ ದೊಡ್ಡಪ್ಪ ನಾರಾಯಣರಾವ್ ದೂರಿದರು.

‘ಪತ್ನಿ, ಮಗನನ್ನು ಕಳೆದುಕೊಂಡ ದುಃಖದಲ್ಲಿದ್ದ ಲೋಹಿತ್ ಅವರನ್ನು ಠಾಣೆಯಲ್ಲೇ ಕೂರಿಸಿಕೊಂಡು ಪೊಲೀಸರು ಮತ್ತಷ್ಟು ನೋವುಂಟು ಮಾಡಿದ್ದಾರೆ. ಈ ಕ್ರಮ ಸರಿಯಲ್ಲ. ಈ ಬಗ್ಗೆ ತನಿಖೆಯಾಗಬೇಕು’ ಎಂದೂ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.