ADVERTISEMENT

ಉಪಚುನಾವಣೆ ಶೇ 66.82 ಮತದಾನ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2021, 3:20 IST
Last Updated 4 ಸೆಪ್ಟೆಂಬರ್ 2021, 3:20 IST
ಹರಿಹರದ ಗುರು ತಿಪ್ಪೇರುದ್ರಸ್ವಾಮಿ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಲು ಶುಕ್ರವಾರ ಸರದಿಯಲ್ಲಿ ನಿಂತಿದ್ದ ಮತದಾರರು.
ಹರಿಹರದ ಗುರು ತಿಪ್ಪೇರುದ್ರಸ್ವಾಮಿ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಲು ಶುಕ್ರವಾರ ಸರದಿಯಲ್ಲಿ ನಿಂತಿದ್ದ ಮತದಾರರು.   

ಹರಿಹರ: ಕಾಳಿದಾಸ ನಗರದ 14ನೇ ವಾರ್ಡ್‌ಗೆ ಶುಕ್ರವಾರ ನಡೆದ ಉಪಚುನಾವಣೆಯಲ್ಲಿ ಶೇ 66.82ರಷ್ಟು ಮತದಾನವಾಗಿದೆ. ಒಟ್ಟು 2,161 ಮತದಾರರಲ್ಲಿ 1,444 ಮತದಾರರು ತಮ್ಮ ಹಕ್ಕು ಚಲಾಯಿಸಿದರು.

ನಗರದ ಗುರು ತಿಪ್ಪೇರುದ್ರಸ್ವಾಮಿ ಶಾಲೆಯಲ್ಲಿ 2 ಮತಗಟ್ಟೆಯಲ್ಲಿ ಮತದಾನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಬೆಳಿಗ್ಗೆ 7ರಿಂದ ಮತದಾನ ಆರಂಭಗೊಂಡಿತು. ಆರಂಭದಲ್ಲಿ ಮಂದಗತಿಯಲ್ಲಿ ಸಾಗಿದ ಮತದಾನವು ಬೆಳಿಗ್ಗೆ 9ರಿಂದ ಮಧ‍್ಯಾಹ್ನ 1ರ ವರೆಗೆ ಏರುಗತಿಯಲ್ಲಿ ಸಾಗಿತು. ಸಂಜೆ 5ರಿಂದ ಮತದಾನ ಇಳಿಮುಖವಾಗಿ ಸಾಗಿ 6ಕ್ಕೆ ಮುಕ್ತಾಯವಾಯಿತು.

ಚುನಾವಣೆ ಕಣದಲ್ಲಿ ಜೆಡಿಎಸ್‍ನಿಂದ ಬಿ. ಅಲ್ತಾಫ್, ಕಾಂಗ್ರೆಸ್‍ನಿಂದ ಜೀನತ್‍ ಉನ್ನೀಸಾ, ಬಿಜೆಪಿಯಿಂದ ಸಂತೋಷ್‍ ರಾಜನಹಳ್ಳಿ ಹಾಗೂ ಪಕ್ಷೇತರ ಅಭ್ಯರ್ಥಿ ಸಂಕೇತ್‍ ಸ್ಪರ್ಧಿಸಿದ್ದರು. ಮತಗಟ್ಟೆಯ ಸುತ್ತ ಮೂರು ಪಕ್ಷಗಳ ನಾಯಕರು ಹಾಗೂ ಕಾರ್ಯಕರ್ತರು ಠಿಕಾಣಿ ಹೂಡಿದ್ದರು. ಮತಗಟ್ಟೆಗೆ ಬರುವ ಮತದಾರರಿಗೆ ತಮ್ಮ ಪಕ್ಷದ ಅಭ್ಯರ್ಥಿ ಪರ ಮತ ಚಲಾಯಿಸುವಂತೆ ಮನವೊಲಿಸುವ ಅಂತಿಮ ಪ್ರಯತ್ನದಲ್ಲಿ ನಿರತರಾಗಿದ್ದರು.

ADVERTISEMENT

ಕೋವಿಡ್‍ ನಿಯಮಾನುಸಾರ ಮತಗಟ್ಟೆ ಪ್ರವೇಶಿಸುವ ಮತದಾರರಿಗೆ ಮಾಸ್ಕ್‌ ಕಡ್ಡಾಯವಾಗಿತ್ತು. ಮತಗಟ್ಟೆ
ಯಲ್ಲಿ ಥರ್ಮಲ್‍ ಸ್ಕ್ಯಾನಿಂಗ್‍, ಸ್ಯಾನಿ
ಟೈಸರ್‍ ವ್ಯವಸ್ಥೆ ಕಲ್ಪಿಸಲಾಗಿತ್ತು. ಆಶಾ ಕಾರ್ಯಕರ್ತೆಯರು ಮತದಾರರ ದೇಹ ತಾಪಮಾನ ತಪಾಸಣೆ ನಡೆಸಿದರು.

ಎಲ್ಲಾ ಪಕ್ಷದ ನಾಯಕರಿಗೆ ಉಪಚುನಾವಣೆ ಪ್ರತಿಷ್ಠೆಯ ಕಣವಾಗಿತ್ತು. ಮತಗಟ್ಟೆಯ ಹೊರಭಾಗದಲ್ಲಿ ಪಕ್ಷಗಳ ನಾಯಕರ ದಂಡು ಬೀಡುಬಿಟ್ಟಿತ್ತು. ಜನದಟ್ಟಣೆ ನಿಯಂತ್ರಣ ಹಾಗೂ ಶಾಂತಿ ಸುವ್ಯವಸ್ಥೆಗಾಗಿ ಪಿಎಸ್‍ಐ ಸುನೀಲ್‍ ತೇಲಿ ನೇತೃತ್ವದಲ್ಲಿ ಪೋಲಿಸ್‍ ತಂಡ ನಿಯೋಜನೆಗೊಂಡಿತ್ತು. ಶಾಂತಿಯುತ ಮತದಾನ ನಡೆಯಿತು. ಉಪಚುನಾವಣೆಯ ಮತ ಎಣಿಕೆ ಕಾರ್ಯ ಸೆ.6ರ ಬೆಳಿಗ್ಗೆ 8ಕ್ಕೆ ಮಿನಿ ವಿಧಾನಸೌಧದಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.