ADVERTISEMENT

ಕುರಿಗಾಹಿಯ ಕೊಲೆ: ಅಪರಾಧಿಗೆ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2020, 14:49 IST
Last Updated 22 ಜನವರಿ 2020, 14:49 IST

ದಾವಣಗೆರೆ: ಕುರಿಗಾಹಿಯನ್ನು ಕೊಂದು ಚಿನ್ನಾಭರಣ, ಹಣ ದೋಚಿಕೊಂಡು ಹೋಗಿದ್ದ ಪ್ರಕರಣದಲ್ಲಿ ಅಪರಾಧಿಗೆ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು ಬುಧವಾರ ಜೀವಾವಧಿ ಶಿಕ್ಷೆ, ₹ 25 ಸಾವಿರ ದಂಡ ವಿಧಿಸಿದೆ.

ಹರಿಹರ ತಾಲ್ಲೂಕು ಭಾನುವಳ್ಳಿಯ ಹಾಲೇಶ್‌ (30) ಶಿಕ್ಷೆಗೊಳಗಾದ ಅಪರಾಧಿ. 2015ರ ಜುಲೈ 7ರಂದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಮುದ್ದೆಹಳ್ಳಿ ಗ್ರಾಮದ ಮುದ್ದಣ್ಣ ಎಂಬ ಕುರಿಗಾಹಿ ತನ್ನ ಸಂಗಡಿಗರ ಜತೆಗೆ ಹರಿಹರ ತಾಲ್ಲೂಕಿನ ಲಕ್ಕಶೆಟ್ಟಿಹಳ್ಳಿಯ ಮಲ್ಲಿಕಾರ್ಜುನ ಅವರ ಜಮೀನಿನಲ್ಲಿ ಕುರಿ ಮಂದೆಯನ್ನು ಬಿಟ್ಟಿದ್ದರು. ಮುದ್ದಣ್ಣ ಒಬ್ಬರೇ ಬಿಡಾರದ ಬಳಿ ಇದ್ದಾಗ ಅವರನ್ನು ಹಾಲೇಶ್‌ ಎಂಬಾತ ಮಾರಕಾಸ್ತ್ರದಿಂದ ಹೊಡೆದು ಕೊಲೆ ಮಾಡಿ ಉಂಗುರ, ಕೈಚೈನು, ಹಣವನ್ನು ಎತ್ತಿಕೊಂಡು ಹೋಗಿದ್ದ.

ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಕೆಂಗಬಾಲಯ್ಯ ಅವರು ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ದಂಡ ವಿಧಿಸಿರುವ ₹ 25 ಸಾವಿರದಲ್ಲಿ ₹ 10 ಸಾವಿರವನ್ನು ಮೃತರ ಮಗ ಎಂ. ಬಸೇಗೌಡ ಅವರಿಗೆ ನೀಡುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಕೆ.ಕೆಂಚಪ್ಪ ವಾದಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.