ದಾವಣಗೆರೆ: ಮೂರು ವರ್ಷದ ಹಿಂದೆ ಪತ್ನಿಯನ್ನು ಕೊಂದ ಪತಿಗೆ ಮಂಗಳವಾರ ಎರಡನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ಮತ್ತು ₹ 45 ಸಾವಿರ ದಂಡ ವಿಧಿಸಿದೆ.
ಆಗಿನ ಹೊನ್ನಾಳಿ ತಾಲ್ಲೂಕಿನ ಕುಂಕುವಾದ ನರಸಿಂಹ ಶಿಕ್ಷೆಗೊಳಗಾದ ಅಪರಾಧಿ. ಹಣಕ್ಕಾಗಿ ಪತ್ನಿ ಹೇಮಾವತಿಯನ್ನು ನಿರಂತರ ಪೀಡಿಸುತ್ತಿದ್ದ. ಹಲವು ಬಾರಿ ಪಂಚಾಯಿತಿ ನಡೆಸಲಾಗಿತ್ತು. ಶೌಚಾಲಯ ನಿರ್ಮಾಣಕ್ಕೆ ಕುಂಕುವಾ ಪಂಚಾಯಿತಿಯಿಂದ 2017ರಲ್ಲಿ ಹೇಮಾವತಿ ಹೆಸರಿಗೆ ₹ 10 ಸಾವಿರ ಹಣ ಮಂಜೂರು ಮಾಡಿತ್ತು. ಆ ಹಣ ನೀಡುವಂತೆ ನರಸಿಂಹ ಕೇಳಿದಾಗ ಪತ್ನಿ ನೀಡಲಿಲ್ಲ ಎಂಬ ಕಾರಣಕ್ಕೆ 2017ರ ಆಗಸ್ಟ್ 16ರಂದು ಹಾರೆಯಿಂದ ಹೊಡೆದಿದ್ದ. ಹೇಮಾವತಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ನ್ಯಾಮತಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶೆ ನಾಗಶ್ರೀ ಅವರು ಶಿಕ್ಷೆ ವಿಧಿಸಿ ತೀರ್ಪಿತ್ತಿದ್ದಾರೆ. ದಂಡದಲ್ಲಿ ₹ 40 ಸಾವಿರವನ್ನು ಅವರ ಮಕ್ಕಳಾಧ ವಿನಯ್ ಮತ್ತು ವಿನುತಾಗೆ ನೀಡಬೇಕು ಎಂದು ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ. ನಾಗರಾಜ ಆಚಾರ್ ವಾದಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.