ದಾವಣಗೆರೆ: ‘ರಾಜ್ಯದ 105 ಕ್ಷೇತ್ರಗಳಲ್ಲಿ ಮುಸ್ಲಿಮರ ಪ್ರಾಬಲ್ಯವಿದ್ದು, ಅಂತಹ ಕಡೆಗಳಲ್ಲಿ ಸಿದ್ದರಾಮಯ್ಯ ಅವರನ್ನು ಬೆಂಬಲಿಸಬೇಕು’ ಎಂದು ಶಾಸಕ ಜಮೀರ್ ಅಹಮ್ಮದ್ ಖಾನ್ ಮನವಿ ಮಾಡಿದರಯ.
ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವದ ಅಂಗವಾಗಿ ನಗರದ ತಾಜ್ ಪ್ಯಾಲೇಸ್ನಲ್ಲಿ ಮಂಗಳವಾರ ಆಯೋಜಿಸಿದ್ದ ಅಲ್ಪಸಂಖ್ಯಾತರ ವಿಭಾಗ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
‘ಗೋಹತ್ಯೆಯನ್ನು ಬಿಜೆಪಿ ಸರ್ಕಾರ ನಿಷೇಧಿಸಿದೆ. ಆದರೆ ಗೋ ಮಾಂಸವನ್ನು ತಿನ್ನುತ್ತೇವೆ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು. ಟಿಪ್ಪು ಜಯಂತಿಯನ್ನು ನಿಷೇಧಿಸುವ ಪ್ರಸ್ತಾಪ ಬಂದಾಗ ಸಿದ್ದು ಅದರ ವಿರುದ್ಧವಾಗಿ ನಿಂತರು’ ಎಂದು ನೆನಪಿಸಿಕೊಂಡರು.
ಸಿದ್ದರಾಮಯ್ಯ ಆಡಳಿತದ ಅವಧಿಯಲ್ಲಿ ನೀಡಿದ ಕಾರ್ಯಕ್ರಮಗಳು, ಅಲ್ಪಸಂಖ್ಯಾತರ ಅಭಿವೃದ್ಧಿಗೆ ಅನುದಾನ ಒದಗಿಸಿರುವ ಬಗ್ಗೆ ತಿಳಿಸಿದರು.
ಮುಗಿಬಿದ್ದ ಅಭಿಮಾನಿಗಳು: ಜಮೀರ್ ತಾಜ್ ಪ್ಯಾಲೇಸ್ಗೆ ಬಂದಾಗ ಅವರನ್ನು ಸನ್ಮಾನಿಸಲು ಜನರು ಮುತ್ತಿಕೊಂಡರು. ಒಮ್ಮಿಂದೊಮ್ಮೆಲೆ ವೇದಿಕೆಗೆ ನುಗ್ಗಲು ಯತ್ನಿಸಿದರು. ಅವರಿಂದ ತಪ್ಪಿಸಿಕೊಂಡು ಹೊರ ಬರಲು ಜಮೀರ್ ಪ್ರಯಾಸಪಡಬೇಕಾಯಿತು. ಏಕಾಏಕಿ ವೇದಿಕೆಗೆ ನುಗ್ಗಿ ಹಾರ ಹಾಕಲು, ಸೆಲ್ಫಿ ಪಡೆಯಲು ಜನರು ಮುಂದಾದಾಗ ನೂಕು ನುಗ್ಗಲು ಉಂಟಾಯಿತು. ಆ ಸಂದರ್ಭದಲ್ಲಿ ತಾಜ್ ಪ್ಯಾಲೇಸ್ನ ಗಾಜುಗಳು ಪುಡಿಯಾದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.