ADVERTISEMENT

ದಾವಣಗೆರೆ | ಮಹಾದ್ವಾರ, ವಾಲ್ಮಿಕಿ ವೃತ್ತದ ನಾಮಫಲಕ ತೆರವು ಖಂಡನೀಯ: ತುಳುಸಿರಾಮ್

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2024, 14:35 IST
Last Updated 12 ಮಾರ್ಚ್ 2024, 14:35 IST

ದಾವಣಗೆರೆ: ‘ಮಾರ್ಚ್ 11ರಂದು ಹರಿಹರ ತಾಲ್ಲೂಕಿನ ಭಾನುವಳ್ಳಿ ಗ್ರಾಮದ ವೀರಮದಕರಿ ಮಹಾದ್ವಾರ ಹಾಗೂ ವಾಲ್ಮಿಕಿ ವೃತ್ತದ ನಾಮಫಲಕವನ್ನು ಜಿಲ್ಲಾಡಳಿತ ತೆರವುಗೊಳಿಸಿರುವುದು ಖಂಡನೀಯ’ ಎಂದು ವಾಲ್ಮೀಕಿ ಸಮುದಾಯದ ಮುಖಂಡ ತುಳುಸಿರಾಮ್ ಟಿ.ಆರ್. ಹೇಳಿದರು.

‘1999ರಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಅನುದಾನದಡಿ ನಿರ್ಮಾಣಗೊಂಡಿದ್ದ ಮಹಾದ್ವಾರವನ್ನು ಪುಣ್ಯಾನಂದಪುರಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ಮಾಜಿ ಸಚಿವ ಎಚ್. ಶಿವಪ್ಪ ಅವರು ಉದ್ಘಾಟಿಸಿದ್ದರು. ಇದನ್ನು ಅವಲೋಕಿಸದೇ ಸತ್ಯಶೋಧನಾ ಸಮಿತಿ ವರದಿ ಆಧರಿಸಿ ನಾಮಫಲಕ ತೆರವುಗೊಳಿಸಿರುವುದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಸರ್ಕಾರದಿಂದ ಮಂಜೂರಾದ ಅನುದಾನದಿಂದ ಮಹಾದ್ವಾರ ಹಾಗೂ ನಾಮಫಲಕವನ್ನು ತೆರವುಗೊಳಿಸಿ ನಷ್ಟ ಮಾಡಿರುವುದಲ್ಲದೆ ನಾಡಿನ ಮುಂಚೂಣಿಯಲ್ಲಿರುವ ಹಿರಿಯರಿಗೆ ಅಪಮಾನಗೊಳಿಸಿದಂತೆ ಆಗಿದೆ. ಜಿಲ್ಲಾಡಳಿತವು ಇದನ್ನು ಪುನರ್ ಪ್ರತಿಷ್ಠಾಪನೆ ಮಾಡಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಾಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು’ ಎಂದು ಎಚ್ಚರಿಸಿದರು.

ADVERTISEMENT

‘ತೆರವು ಕಾರ್ಯಾಚರಣೆಯ ಮೂಲಕ ಸಮುದಾಯವನ್ನು ತುಳಿಯುವ ಕೆಲಸ ಆಗಿದೆ. ಇದರ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇದ್ದಾರೆ. ತೆರವಿನ ವೇಳೆ ಪೊಲೀಸರು ಪ್ರತಿಭಟನನಿರತ ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಕಾನೂನು ಹೋರಾಟಕ್ಕೂ ತಯಾರಿ ನಡೆಸುತ್ತಿದ್ದೇವೆ’ ಎಂದರು. 

ಜಿಗಳಿ ರಂಗಪ್ಪ, ಮಲ್ಲಾಪುರ ದೇವರಾಜ, ಬೇವಿನಹಳ್ಳಿ ಮಹೇಶ್, ಕೆ.ಸಿ. ನಾಗರಾಜ, ಕೆ.ಆರ್. ರಂಗಪ್ಪ, ಕೆ.ಎಂ. ಚೆನ್ನಬಸಪ್ಪ, ರಂಗನಾಥ ರಾವ್ ಹಾಗೂ ನಿಜಲಿಂಗಪ್ಪ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.