ದಾವಣಗೆರೆ: ಹುಬ್ಬಳ್ಳಿಯಲ್ಲಿ ನಡೆದ ವಿದ್ಯಾರ್ಥಿನಿ ನೇಹಾ ಹತ್ಯೆಯನ್ನು ಉಮ್ಮತ್ ಚಿಂತಕರ ವೇದಿಕೆ ತೀವ್ರವಾಗಿ ಖಂಡಿಸಿದೆ.
‘ಕೆಲವರಿಗೆ ಕಾನೂನಿನ ಭಯ ಇಲ್ಲದೆ ಇರುವುದರಿಂದ ಈ ರೀತಿಯ ದುಷ್ಕೃತ್ಯಗಳಿಗೆ ಕೈ ಹಾಕುತ್ತಿದ್ದಾರೆ. ಇದು ಇಡೀ ಸಮಾಜದ ಮೇಲೆ ಪರಿಣಾಮ ಬೀರುತ್ತದೆ. ಈ ಹತ್ಯೆಯು ಇಡೀ ಮಾನವ ಕುಲ ನಾಚುವಂತೆ ಮಾಡಿರುವಂತಹ ಹೇಯ ಕೃತ್ಯವಾಗಿದೆ’ ಎಂದು ವೇದಿಕೆಯ ಅಧ್ಯಕ್ಷ ಅನಿಸ್ ಪಾಷ ಹೇಳಿದ್ದಾರೆ.
‘ಇಂತಹ ಘಟನೆಗಳು ನಡೆದಾಗ ಎಲ್ಲರೂ ಒಕ್ಕೊರಲಿನಿಂದ ಖಂಡಿಸಬೇಕು. ಆದರೆ, ಚುನಾವಣಾ ಸಂದರ್ಭ ಇರುವುದರಿಂದ ಕೆಲವು ಕೋಮುವಾದಿ ಪಕ್ಷಗಳು ಇದನ್ನೇ ಬಂಡವಾಳವಾಗಿಸಿಕೊಂಡು ಒಂದು ಸಮುದಾಯದ ವಿರುದ್ಧ ಎತ್ತಿ ಕಟ್ಟಿ, ಅದರ ಲಾಭ ಪಡೆಯುವ ಪ್ರಯತ್ನದಲ್ಲಿವೆ. ಸಾವಿನ ದುಃಖದ ಸಂಗತಿಯನ್ನು ಸ್ವಾರ್ಥಕ್ಕಾಗಿ ಬಳಸಿಕೊಂಡರೆ, ಮಾನವ ಕುಲದ ತೇಜೋವಧೆ ಮಾಡಿದಂತೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
‘ಪಕ್ಷಗಳು ಜನಸಾಮಾನ್ಯರ ಸಮಸ್ಯೆ ಆಲಿಸಿ ಅದನ್ನು ಬಗೆಹರಿಸುವ ಬಗ್ಗೆ ಚರ್ಚಿಸಿ ಪರಿಹಾರ ಒದಗಿಸಿಕೊಡಬೇಕು. ಅದರ ಬದಲಿಗೆ ಜಾತಿ – ಜಾತಿಗಳ ಮಧ್ಯೆ ವೈಮನಸ್ಸು ಹುಟ್ಟುವಂತೆ ಮಾಡುತ್ತಿವೆ. ಇದರಿಂದ ಮೃತ ಯುವತಿಯ ಪಾಲಕರಿಗೆ ಹೆಚ್ಚಿನ ನೋವು ಕೊಟ್ಟಂತಾಗುತ್ತದೆ’ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.