ದಾವಣಗೆರೆ: ಕೆ.ಟಿ.ಜೆ ನಗರ ಠಾಣೆ ವ್ಯಾಪ್ತಿಯ ಶ್ರೀರಾಮ ಬಡಾವಣೆಯಲ್ಲಿ ನವವಿವಾಹಿತೆ ಬಿ. ಶಿಲ್ಪಾ (22) ಭಾನುವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚಿತ್ರದುರ್ಗ ತಾಲ್ಲೂಕಿನ ಕೋಣನೂರು ಗ್ರಾಮದ ಶಿಲ್ಪಾ ಅವರು ಅದೇ ಗ್ರಾಮದ ಮಂಜುನಾಥ ಅವರನ್ನು ಪ್ರೀತಿಸುತ್ತಿದ್ದರು. ಅಂತರ್ಜಾತಿ ಎಂಬ ಕಾರಣಕ್ಕೆ ಇವರಿಬ್ಬರ ವಿವಾಹಕ್ಕೆ ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಏಪ್ರಿಲ್ 25ರಂದು ಜಗಳೂರಿನ ಕೊಣಚಕಲ್ಲು ಗ್ರಾಮದ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಹೋಗಿ ಮಂಜುನಾಥ ಅವರೊಂದಿಗೆ ವಿವಾಹವಾಗಿದ್ದರು. ಅಂದೇ ಇಬ್ಬರೂ ದಾವಣಗೆರೆಯ ಶ್ರೀರಾಮ ಬಡಾವಣೆಗೆ ಬಂದು ಬಾಡಿಗೆ ಮನೆ ಮಾಡಿದ್ದರು.
ವಿವಾಹ ನೋಂದಣಿ ಮಾಡಿಸುವ ಸಲುವಾಗಿ ಅಗತ್ಯ ದಾಖಲೆ ತರುವುದಾಗಿ ಮಂಜುನಾಥ ಶುಕ್ರವಾರ ಮಧ್ಯಾಹ್ನ ತೆರಳಿದ್ದರು. ಶನಿವಾರವಾದರೂ ವಾಪಸ್ ಬಂದಿರಲಿಲ್ಲ. ಗಂಡ ಕಾಣೆಯಾಗಿದ್ದಾನೆ ಎಂದು ಕೆ.ಟಿ.ಜೆ. ನಗರ ಠಾಣೆಗೆ ಶನಿವಾರ ಸಂಜೆ ಶಿಲ್ಪಾ ದೂರು ನೀಡಿದ್ದರು.
ಪತಿ ವಾಪಸ್ ಬಾರದೇ ಇರುವುದರಿಂದ ನೊಂದು ಶಿಲ್ಪಾ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.