ಹರಪನಹಳ್ಳಿ: ತಾಲ್ಲೂಕಿನ ಅಡವಿಹಳ್ಳಿ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವಿನ ಜಗಳ ವಿಕೋಪಕ್ಕೆ ತಿರುಗಿದ ಪರಿಣಾಮ ಅನ್ಯ ಜಾತಿಯ ಗುಂಪುಗಳ ನಡುವೆ ಘರ್ಷಣೆ ನಡೆದು ಗುರುವಾರ ರಾತ್ರಿ ಒಬ್ಬರು ಗಾಯಗೊಂಡಿದ್ದಾರೆ.
ಪರಿಶಿಷ್ಟ ಜಾತಿಯ ಹಾಲೇಶ್ ಅವರ ತಲೆಗೆ ಪೆಟ್ಟು ಬಿದ್ದಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಗುರುವಾರ ರಾತ್ರಿ ನಾಗರಪಂಚಮಿ ಹಬ್ಬದ ಪ್ರಯುಕ್ತ ಸೇರಿದ್ದ ಯುವಕರ ಗುಂಪಿನ ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆಯಿತು. ಮಾತಿಗೆ ಮಾತು ಬೆಳೆದು ಗುಂಪು ಘರ್ಷಣೆಗೆ ತಿರುಗಿತು. ಈ ವೇಳೆ ಹಾಲೇಶ್ ಎಂಬುವವರ ತಲೆಗೆ ಬಲವಾಗಿ ಪೆಟ್ಟು ಬಿದ್ದಿತು.
ಅನ್ಯಜಾತಿಯ ಯುವಕರು ಶುಕ್ರವಾರ ಬೆಳಿಗ್ಗೆಯೂ ಪರಿಶಿಷ್ಟ ಜಾತಿಯ ಕಾಲೊನಿಗೆ ನುಗ್ಗಿ ದಾಂಧಲೆ ನಡೆಸಲು ಯತ್ನಿಸಿದರು. ಅಷ್ಟರಲ್ಲೇ ಸ್ಥಳಕ್ಕೆ ಬಂದ ಪೊಲೀಸರು ಯುವಕರನ್ನು ಚದುರಿಸಿದರು ಎನ್ನಲಾಗಿದೆ. ಪೊಲೀಸರು ಬರುತ್ತಿದ್ದಂತೆಯೇ ವಿವಿಧ ಜಾತಿಯ ಮುಖಂಡರು ಗ್ರಾಮದ ಹಾಲಸ್ವಾಮಿ ಮಠದಲ್ಲಿ ಸೇರಿ ಕಟ್ಟೆ ಪಂಚಾಯಿತಿಗೆ ಮುಂದಾದರು.
ವೀರಗಂಗಾಧರ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆದ ಸುದೀರ್ಘ ಸಭೆಯಲ್ಲಿ ಪರಸ್ಪರ ವಾಗ್ವಾದ ನಡೆಯಿತು. ಎಲ್ಲರ ಸಮ್ಮುಖದಲ್ಲಿಯೇ ಜಾತಿಗೆ ನಾಲ್ಕು ಜನರಂತೆ
ಮುಖಂಡರ ತಂಡ ರಚಿಸಿ, ಗದ್ದಲ ಆಗದಂತೆ ಎಚ್ಚರಿಕೆ ವಹಿಸಬೇಕು. ಯಾವುದೇ ಯುವಕರು ಜಗಳ ಮಾಡಿದರೆ, ಅವರಿಗೆ ತಿಳಿವಳಿಕೆ ಹೇಳಬೇಕು. ಇಲ್ಲದಿದ್ದರೆ ಪೊಲೀಸರಿಗೆ ದೂರು ಸಲ್ಲಿಸಲು ಸಭೆ ನಿರ್ಧರಿಸಿತು ಎಂದು ತಿಳಿದುಬಂದಿದೆ. ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.