ಪ್ರಜಾವಾಣಿ ವಾರ್ತೆ
ಚನ್ನಗಿರಿ: ರೈತರು ಪಡೆಯುವ ಪಹಣಿ ಬೆಲೆ ಹೆಚ್ಚಿಸಿರುವುದನ್ನು ವಿರೋಧಿಸಿ ಹಾಗೂ ವಾರ್ಷಿಕವಾಗಿ ರೈತರಿಗೆ ಬೇಕಾಗುವಷ್ಟು ಪಹಣಿಯನ್ನು ಸರ್ಕಾರ ಉಚಿತವಾಗಿ ನೀಡಬೇಕು ಎಂದು ಒತ್ತಾಯಿಸಿ ತಾಲ್ಲೂಕು ರೈತ ಸಂಘ ಮತ್ತು ಹಸಿರು ಸೇನೆ (ಹುಚ್ಚವನಹಳ್ಳಿ ಮಂಜುನಾಥ್ ಬಣ) ಕಾರ್ಯಕರ್ತರು ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಈ ತಿಂಗಳಿಂದಲೇ ಅನ್ವಯವಾಗುವಂತೆ ಪಹಣಿ ಪಡೆಯಲು ದರವನ್ನು ₹ 15ರಿಂದ ₹ 25ಕ್ಕೆ ಹೆಚ್ಚಿಸಿರುವುದು ಖಂಡನೀಯ. ಬೆಳೆ ವಿಮೆ, ಬೆಳೆ ಸಾಲ, ಸಣ್ಣ ಹಿಡುವಳಿದಾರರ ಪ್ರಮಾಣ ಪತ್ರ ಸೇರಿ ಸರ್ಕಾರದ ಸೌಕರ್ಯಗಳನ್ನು ಪಡೆದುಕೊಳ್ಳಲು ಪ್ರತಿಯೊಬ್ಬ ರೈತನಿಗೂ ವಾರ್ಷಿಕವಾಗಿ 40 ಪಹಣಿಗಳು ಬೇಕಾಗುತ್ತವೆ. ಬೆಲೆ ಹೆಚ್ಚಿಸಿರುವುದರಿಂದ ಒಬ್ಬ ರೈತ 40 ಪಹಣಿಗಳಿಗೆ ವಾರ್ಷಿಕವಾಗಿ ₹ 1 ಸಾವಿರ ಖರ್ಚು ಮಾಡಬೇಕಾಗುತ್ತದೆ. ಇದು ರೈತರಿಗೆ ತುಂಬಾ ಹೊರೆಯಾಗಲಿದೆ ಎಂದು ಹೇಳಿದರು.
ಅಟಲ್ ಜನಸ್ನೇಹಿ ಕೇಂದ್ರದ ಮೂಲಕ ಜನ ಸಾಮಾನ್ಯರು ಸರ್ಕಾರದ ವಿವಿಧ ಸೌಕರ್ಯಗಳನ್ನು ಪಡೆದುಕೊಳ್ಳಲು ಇದ್ದ ₹ 25 ಶುಲ್ಕವನ್ನು ₹ 40ಕ್ಕೆ ಹೆಚ್ಚಿಸಿರುವುದು ಸರಿಯಲ್ಲ. ಇದರಿಂದ ಕಡುಬಡವರು ಹಾಗೂ ಮಧ್ಯಮ ವರ್ಗದವರಿಗೆ ಕಷ್ಟವಾಗಲಿದೆ. ಸಾಮಾನ್ಯರಿಂದ ಸರ್ಕಾರ ಹಣ ವಸೂಲಿ ಮಾಡುವುದನ್ನು ನಿಲ್ಲಿಸಬೇಕು. ಹಾಗೆಯೇ ಜನಸ್ನೇಹಿ ಕೇಂದ್ರಗಳ ಶುಲ್ಕವನ್ನು ₹ 10ಕ್ಕೆ ಇಳಿಸಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಅಧ್ಯಕ್ಷ ಯಲೋದಹಳ್ಳಿ ರವಿಕುಮಾರ್, ಕುಮಾರ್, ಕೃಷ್ಣಮೂರ್ತಿ, ಶಿವಪ್ಪ, ಶೇಖರಪ್ಪ, ಅಂಜು, ಉಚ್ಚಂಗೆಪ್ಪ ಹಾಗೂ ನಾಗರಾಜ್ ಉಪಸ್ಥಿತರಿದ್ದರು.
ಪಟ್ಟಣದ ಪ್ರವಾಸಿ ಮಂದಿರದಿಂದ ಮೆರವಣಿಗೆ ಹೊರಟು ತಹಶೀಲ್ದಾರ್ ಪಟ್ಟರಾಜಗೌಡ ಅವರಿಗೆ ಮನವಿ ಸಲ್ಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.