ಮಲೇಬೆನ್ನೂರು: ಕ್ಷೇತ್ರದ ಅಭಿವೃದ್ಧಿಗಿಂತ ಸ್ವಯಂ ಅಭಿವೃದ್ಧಿ ಹೊಂದಿರುವ ಸಂಸದ ಜಿ.ಎಂ ಸಿದ್ದೇಶ್ವರಗೆ ಕ್ಷೇತ್ರದ ಕುರಿತು ಆಳವಾದ ಅರಿವು ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಟೀಕಿಸಿದರು.
ಪಟ್ಟಣದ ಮುಖ್ಯವೃತ್ತದಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರದಲ್ಲಿ ತಮ್ಮ ಪತ್ನಿ ಡಾ.ಪ್ರಭಾ ಪರವಾಗಿ ಮತಯಾಚಿಸಿ ಅವರು ಮಾತನಾಡಿದರು.
ಸಂಸದರು ಗುಟ್ಕಾ ತಯಾರಿಸುವ ಕಾರ್ಖಾನೆಗಳನ್ನು ಸ್ಥಾಪಿಸುವ ಮೂಲಕ ಜನರು ರೋಗಕ್ಕೆ ತುತ್ತಾಗಲು ಕಾರಣಕರ್ತರಾಗಿದ್ದಾರೆ. ರೋಗಕ್ಕೆ ತುತ್ತಾಗುವವರಿಗೆ ಚಿಕಿತ್ಸೆ ನೀಡಲು ಡಾ.ಪ್ರಭಾ ಬರುತ್ತಿದ್ದಾರೆ ಎಂದು ಕಿಚಾಯಿಸಿದರು.
ಪಟ್ಟಣದಲ್ಲಿ ಸಂತೆ ಮಾರುಕಟ್ಟೆ, ಸಿಸಿ ರಸ್ತೆ ಕಾಮಗಾರಿ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು, ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿ ಗೆಲ್ಲಿಸಿ ಎಂದು ಕೋರಿದರು.
ಉದ್ಯಮಿ ಬಿ.ಎಂ. ವಾಗೀಶ್ ಸ್ವಾಮಿ, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಮಾಜಿ ಶಾಸಕ ಎಸ್. ರಾಮಪ್ಪ ಮಾತನಾಡಿದರು.
ಪುರಸಭಾ ಮಾಜಿ ಸದಸ್ಯ ಸುಬ್ಬಿ ರಾಜಪ್ಪ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರು ರೋಡ್ ಶೋ ನಡೆಸಿದರು.
ಮಾಜಿ ಶಾಸಕಿ ಜಲಜಾನಾಯ್ಕ, ಎಚ್.ಎಸ್. ನಾಗರಾಜ್, ಡಾ.ಚಂದ್ರಶೇಖರ್, ಪುರಸಭಾ ಸದಸ್ಯ ನಯಾಜ್, ಶ್ರೀಕಾಂತ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.