ADVERTISEMENT

ವ್ಯಾಪಾರ ಸಾಮ್ರಾಜ್ಯ ರಕ್ಷಿಸಲು ಸ್ಪರ್ಧಿಸಿರುವವರನ್ನು ತಿರಸ್ಕರಿಸಿ

ಬಿಎಸ್‌ಪಿ ಅಭ್ಯರ್ಥಿ ಡಿ.ಹನುಮಂತಪ್ಪ ಪ್ರಚಾರ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2024, 15:52 IST
Last Updated 27 ಏಪ್ರಿಲ್ 2024, 15:52 IST
ಹರಿಹರದ ಡಾ.ವೈ.ನಾಗಪ್ಪ ಆಶ್ರಯ ಕಾಲೊನಿಯಲ್ಲಿ ಬಹುಜನ ಸಮಾಜ ಪಾರ್ಟಿಯ ಲೋಕಸಭಾ ಅಭ್ಯರ್ಥಿ ಡಿ. ಹನುಮಂತಪ್ಪ ಶನಿವಾರ ಪ್ರಚಾರ ನಡೆಸಿದರು
ಹರಿಹರದ ಡಾ.ವೈ.ನಾಗಪ್ಪ ಆಶ್ರಯ ಕಾಲೊನಿಯಲ್ಲಿ ಬಹುಜನ ಸಮಾಜ ಪಾರ್ಟಿಯ ಲೋಕಸಭಾ ಅಭ್ಯರ್ಥಿ ಡಿ. ಹನುಮಂತಪ್ಪ ಶನಿವಾರ ಪ್ರಚಾರ ನಡೆಸಿದರು   

ಹರಿಹರ: ತಮ್ಮ ಕುಟುಂಬ ಸದಸ್ಯರ ವ್ಯಾಪಾರ ವಹಿವಾಟು ರಕ್ಷಿಸಿಕೊಳ್ಳಲು ಚುನಾವಣೆಯಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳನ್ನು ಮತದಾರರು ತಿರಸ್ಕರಿಸಬೇಕು ಎಂದು ಬಹುಜನ ಸಮಾಜ ಪಾರ್ಟಿಯ ದಾವಣಗೆರೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಿ.ಹನುಮಂತಪ್ಪ ಮನವಿ ಮಾಡಿದರು.

ನಗರದ ಡಾ.ವೈ.ನಾಗಪ್ಪ ಆಶ್ರಯ ಕಾಲೊನಿಯಲ್ಲಿ ಶನಿವಾರ ಪ್ರಚಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕಾಂಗ್ರೆಸ್ ಅಭ್ಯರ್ಥಿಯ ಕುಟುಂಬ ಸದಸ್ಯರು ಗಣಿಗಾರಿಕೆ, ಮದ್ಯ ತಯಾರಿಕೆ, ವೃತ್ತಿಪರ ಶಿಕ್ಷಣ ಸಂಸ್ಥೆ, ಕಾರ್ಪೊರೇಟ್ ಹಂತದ ಆಸ್ಪತ್ರೆ ಇತ್ಯಾದಿ ವ್ಯಾಪಾರ ವಹಿವಾಟು ಹೊಂದಿದ್ದಾರೆ. ಇನ್ನೊಂದೆಡೆ ಬಿಜೆಪಿ ಅಭ್ಯರ್ಥಿಯ ಕುಟುಂಬ ಸದಸ್ಯರು ಗಣಿಗಾರಿಕೆ, ಗುಟ್ಕಾ ತಯಾರಿಕೆ, ವೃತ್ತಿಪರ ಶಿಕ್ಷಣ ಸಂಸ್ಥೆ ನಡೆಸುತ್ತಿದ್ದಾರೆ. ಈ ಬೃಹತ್ ವ್ಯಾಪಾರ ವಹಿವಾಟುಗಳಿಗೆ ಆದಾಯ, ವಾಣಿಜ್ಯ ತೆರಿಗೆ, ಗಣಿ, ಅಬಕಾರಿ, ಶಿಕ್ಷಣ ಇತರೆ ಇಲಾಖಾಧಿಕಾರಿಗಳಿಂದ ತೊಂದರೆಯಾಗದಿರಲೆಂದು ಎರಡೂ ಪಕ್ಷಗಳ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ ಎಂದು ಟೀಕಿಸಿದರು.

ADVERTISEMENT

ಕಾಂಗ್ರೆಸ್‌ನವರು ಜಾತ್ಯತೀತತೆ, ಅಹಿಂದ, ಸಾಮರಸ್ಯದ ಸೋಗನ್ನು ಹಾಕಿಕೊಂಡಿದ್ದರೆ, ಬಿಜೆಪಿಯವರು ಧರ್ಮ, ದೇಶ ರಕ್ಷಣೆಯ ಪೋಷಾಕು ಧರಿಸಿದ್ದಾರೆ. ತುಂಬಿ ತುಳುಕುತ್ತಿರುವ ಇವರ ಅಪಾರ ಮೌಲ್ಯದ ಖಜಾನೆಯಿಂದ ಸ್ವಲ್ಪ ಭಾಗವನ್ನು ವ್ಯಯಿಸಿ ಮತದಾರರನ್ನು ಭಾವನಾತ್ಮಕವಾಗಿ ಪ್ರಚೋದಿಸುತ್ತಾರೆ. ಇಂತಹ ಅಭ್ಯರ್ಥಿಗಳಿಂದ ಜನರಿಗೆ ಯಾವುದೇ ಪ್ರಯೋಜನವಿಲ್ಲ. ಭಾವನಾತ್ಮಕ ಸೆಳೆತಕ್ಕೆ ಒಳಗಾಗಿ ಸಾಮ್ರಾಜ್ಯಶಾಹಿಗಳಿಗೆ ಅಧಿಕಾರ ನೀಡುವ ಬದಲು ಅಹಿಂದ ವರ್ಗದವರ ಹಿತರಕ್ಷಣೆ ಮಾಡುವ ಬಿಎಸ್‌ಪಿಗೆ ಈ ಬಾರಿ ಮತ ಚಲಾಯಿಸಬೇಕು ಎಂದು ಅವರು ಕೋರಿದರು.

ದೇಶದ ಬೆನ್ನೆಲುಬಾಗಿರುವ ಮೂಲ ಸಂವಿಧಾನ, ಅಹಿಂದ ಹಾಗೂ ಮಹಿಳೆಯರ ರಕ್ಷಣೆ, ದೇಶದ ಅಭಿವೃದ್ಧಿ ಬಿಎಸ್‌ಪಿ ಗುರಿಯಾಗಿದೆ ಎಂದರು.

ಮುಖಂಡರಾದ ಚಂದ್ರಪ್ಪ ಕೊಪ್ಪದ್, ಮಧು ಅಣಜಿ, ಹನುಮಂತಪ್ಪ ಭಾನುವಳ್ಳಿ, ಪುನೀತ್, ವಿಶ್ವನಾಥ್, ಸಿದ್ದಪ್ಪ, ಅಂಜಿನಪ್ಪ, ವೆಂಕಟೇಶ್, ಶ್ರೀನಿವಾಸ್, ಹರೀಶ್, ಹಾಲೇಶ್, ಇರ್ಫಾನ್, ಅಬ್ದುಲ್ಲಾ, ಕೆಂಚಪ್ಪ, ಮಂಜುನಾಥ್, ಸುಶೀಲಮ್ಮ, ನೀಲಮ್ಮ, ಗಂಗಮ್ಮ, ಶಾಂತಮ್ಮ ಪಾಲ್ಗೊಂಡಿದ್ದರು.

ಹರಿಹರ: ಹರಿಹರದ ಡಾ.ವೈ.ನಾಗಪ್ಪ ಆಶ್ರಯ ಕಾಲೋನಿಯಲ್ಲಿ ಶನಿವಾರ ಬಹುಜನ ಸಮಾಜ ಪಾರ್ಟಿಯ ಲೋಕಸಭಾ ಅಭ್ಯರ್ಥಿ ಡಿ.ಹನುಮಂತಪ್ಪ ಪ್ರಚಾರ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.