
ನ್ಯಾಮತಿ; ಸಂದಲ್ ಉರುಸ್ ಆಚರಣೆ ಎಲ್ಲ ಧರ್ಮದವರ ಭಾವೈಕ್ಯತೆಯ ಸಂಕೇತವಾಗಿದೆ, ಮಠಗಳಿಗೂ ಉರುಸ್ ಕಾರ್ಯಕ್ರಮಕ್ಕೂ ಅವಿನಾಭಾವ ಸಂಬಂಧ ಇದೆ ಎಂದು ರಾಂಪುರದ ಬೃಹನ್ಮಠದ ಸದ್ಗುರು ಶಿವಕುಮಾರ ಶಿವಾಚಾರ್ಯ ಹಾಲಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ಭಾನುವಾರ ಹಜರತ್ ಬಂದೇ ಶಾವಲಿ ದರ್ಗಾ ಮತ್ತು ಶಯಾದುಲ್ಲಾ ಷಾ ದರ್ಗಾದ ಉರುಸ್ ಗಂಧ ಉತ್ಸವದ ಅಂಗವಾಗಿ ನಡೆದ ಧರ್ಮಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.
ರಾಂಪುರ ಮತ್ತು ಬಸವಾಪಟ್ಟಣದಲ್ಲಿ ನಡೆಯುವ ಉರುಸ್ ಕಾರ್ಯಕ್ರಮಕ್ಕೆ ಆಯಾ ಮಠದಿಂದ ಪೂಜಾ ಸಾಮಾಗ್ರಿಗಳು, ನೈವೇದ್ಯ ಪದಾರ್ಥಗಳನ್ನು ಕಳುಹಿಸುವ ಪದ್ದತಿ ಇಂದಿಗೂ ಇದೆ. ಮಠದಲ್ಲಿ ಕುರಾನ್ ಪುಸ್ತಕವನ್ನು ಪೂಜಿಸಲಾಗುತ್ತದೆ. ಈಗ ಪಟ್ಟಣದ ಉರುಸ್ ಕಾರ್ಯಕ್ರಮಕ್ಕೆ ಹಿಂದೂ ಗುರುಗಳನ್ನು ಕರೆಸುವ ಮೂಲಕ ಇಲ್ಲಿಯೂ ಸಹಾ ಭಾವೈಕ್ಯತೆ ಮೆರೆದಿದ್ದೀರಿ ಎಂದರು.
ರಾಂಪುರದ ದರ್ಗಾಕ್ಕೆ ಒಂದು ಲಕ್ಷ ರೂಪಾಯಿ ಅಂದಾಜಿನಲ್ಲಿ ಪಂಜಗಳನ್ನು ಕೊಡುಗೆಯಾಗಿ ನೀಡಿರುವುದನ್ನು ಸ್ಮರಿಸಿದರು. ಹಿಂದೂ ಮುಸ್ಲಿಂ ಸಮುದಾಯದವರು ಪರಸ್ಪರ ವಿಶ್ವಾಸದಿಂದ ಬಾಳಬೇಕು ಎಂದು ಸಲಹೆ ನೀಡಿದರು.
ಸೈಬರ್ ವಂಚನೆಗಳು ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಮೊಬೈಲ್ಗಳನ್ನು ಬಳಸಬೇಕು, ಸಮಾಜದಲ್ಲಿ ನಡೆಯುವ ವಂಚನೆ ಪ್ರಕರಣಗಳನ್ನು ತಡೆಯಲು ಸಾರ್ವಜನಿಕರ ಸಹಕಾರ ಮುಖ್ಯ ಎಂದು ಪೊಲೀಸ್ ಕಾನ್ಸ್ಟೇಬಲ್ ನಿರಂಜನ ಸೈಬರ್ ಅಪರಾಧಗಳು ಹೇಗೆ ನಡೆಯುತ್ತವೆ ಎಂಬುದರ ಬಗ್ಗೆ ಮಾಹಿತಿ ನೀಡಿದರು.
ಪಟ್ಟಣದಲ್ಲಿರುವ ಏಕೈಕ ಸರ್ಕಾರಿ ಉರ್ದು ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ತಮ್ಮ ಮಕ್ಕಳಿಗೆ ಮಾತೃ ಭಾಷೆಯಲ್ಲಿ ಶಿಕ್ಷಣ ಕೊಡಿಸಿ, ತಾಯಂದಿರು ತಮ್ಮ ಮಕ್ಕಳಿಗೆ ಸಂಸ್ಕಾರ ಕಲಿಸುವ ಮೂಲಕ ಉತ್ತಮ ಶಿಕ್ಷಣ ಕೊಡಿಸಿ, ಮೊಬೈಲ್ಗಳನ್ನು ಮಕ್ಕಳ ಕೈಗೆ ಕೊಡದಂತೆ ಎಚ್ಚರಿಕೆ ವಹಿಸಿ ಎಂದು ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಎಂ. ಹಾಲಾರಾದ್ಯ ಹೇಳಿದರು.
ಮುಸ್ಲಿಂ ಗುರುಗಳಾದ ಹಜರತ್ ಮಹಮ್ಮದ್ ನಸಿ ಮತ್ತು ಮಹಮದ್ ನೂರೇ ಆಲಮ್ ಮಾತನಾಡಿದರು.
ಉರುಸ್ ಸಮಿತಿಯಿಂದ ಶ್ರೀಗಳನ್ನು ಸನ್ಮಾನಿಸಲಾಯಿತು.
ಪೊಲೀಸ್ ಇಲಾಖೆ ಕೆ.ಮಂಜಪ್ಪ, ಸಮುದಾಯದ ಹಿರಿಯರಾದ ಸಲಾಂಸಾಬ್, ಜಾಮೀಯ ಮಸೀದಿ ಅಧ್ಯಕ್ಷ ಜಬಿಸಾಬ್, ಕಾರ್ಯದರ್ಶಿಗಳಾದ ರಫಿಕ್, ಎನ್.ಎಸ್.ಶಬ್ಬಿರ್, ಮುಖಂಡರಾದ ಶಿಕ್ಷಕ ರಹಮತ್, ಸೈಯದ್ ಅಪ್ಸರ್ ಪಾಷ, ಶಮ್ಸ್ತಬ್ರೀಜ್, ಸಿದ್ದೀಕಿ, ಸತೀಶ ಬಿದರಕಟ್ಟೆ ಉಪಸ್ಥಿತರಿದ್ದರು.
ಇದಕ್ಕೊ ಮೊದಲು ಪ್ರಮುಖ ಬೀದಿಗಳಲ್ಲಿ ಉರುಸ್(ಗಂಧ) ಮರೆವಣಿಗೆ ನಡೆಯಿತು. ರಟ್ಟೆಹಳ್ಳಿ ಮುರ್ಷದ್ಗಳಿಂದ ಭಜನಾ ಕಾರ್ಯಕ್ರಮ ನಡೆಯಿತು. ನಂತರ ಸಾಮೂಹಿಕ ಪ್ರಸಾದ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.