ADVERTISEMENT

ಬಾಲ್ಯ ವಿವಾಹ ರದ್ದುಪಡಿಸಿದ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 29 ಜನವರಿ 2020, 13:42 IST
Last Updated 29 ಜನವರಿ 2020, 13:42 IST

ದಾವಣಗೆರೆ: 18 ವರ್ಷ ತುಂಬದ ಬಾಲಕಿಯನ್ನು ಮದುವೆ ಮಾಡಲು ಮುಂದಾಗಿರುವ ವಿಚಾರ ತಿಳಿದ ಅಧಿಕಾರಿಗಳು ಬುಧವಾರ ಬಾಲಕಿಯ ಮನೆಗೆ ಭೇಟಿ ನೀಡಿ ಮನೆಯವರ ಮನವೊಲಿಸಿ ಮದುವೆ ನಿಲ್ಲಿಸಿದ್ದಾರೆ.

ದಾವಣಗೆರೆ ತಾಲ್ಲೂಕಿನ ಗ್ರಾಮದ 17 ವರ್ಷ 9 ತಿಂಗಳ ಬಾಲಕಿಯನ್ನು ಮತ್ತು ಹರಪನಹಳ್ಳಿ ತಾಲ್ಲೂಕಿನ ಮೈಲಾರಪ್ಪ ಎಂಬ ಯುವಕನ ಜತೆಗೆ ಜ.30ರಂದು ಮದುವೆ ನಡೆಸಲು ಸಿದ್ಧತೆ ನಡೆದಿತ್ತು. ಈ ಬಗ್ಗೆ ಮಾಹಿತಿ ಪಡೆದ ಮಕ್ಕಳ ಸಹಾಯವಾಣಿಯ ಸಂಯೋಜಕ ಟಿ.ಎಂ.ಕೊಟ್ರೇಶ್ ಟಿ.ಎಂ. ಕಾರ್ಯಕರ್ತ ರವಿ.ಬಿ ಅವರು ಶಿಶು ಅಭಿವೃದ್ಧಿ ಯೋಜನೆಯ ಅಂಗನವಾಡಿ ಮೇಲ್ವಿಚಾರಕಿ ಆಶಾ, ಚಾಲಕ ಕುಮಾರ್, ಪಿಡಿಒ ಶಾರದಮ್ಮ, ಮುಖ್ಯ ಶಿಕ್ಷಕ ಎಚ್. ಅಂಜಿನಪ್ಪ, ಮಾಯಕೊಂಡ ಠಾಣೆಯ ಪೊಲೀಸ್ ಅಣ್ಣಯ್ಯ, ನಾಗರಾಜ ಜೊತೆಗೆ ಆ ಮನೆಗೆ ತೆರಳಿದರು.

ಬಾಲ್ಯ ವಿವಾಹ ಮಾಡಿದರೆ ₹ 1 ಲಕ್ಷ ದಂಡ, 1 ವರ್ಷಕ್ಕಿಂತ ಅಧಿಕ ಶಿಕ್ಷೆ ಇರುವ ಬಗ್ಗೆ ವಿವರಿಸಿದರು. 18 ವರ್ಷ ತುಂಬುವವರೆಗೆ ವಿವಾಹ ಮಾಡದಂತೆ ತಿಳಿಸಿದರು. ಡಿ.ಎಸ್.ಎಸ್. ಸಂಘಟನೆಯ ಪರಶುರಾಮ, ಸುರೇಶ್, ಅಂಜನಿ ಫಮತ್ತು ಪ್ರಭು ಅವರ ಸಮ್ಮುಖದಲ್ಲಿ ಈ ಬಗ್ಗೆ ಮುಚ್ಚಳಿಕೆ ಪತ್ರ ಕೂಡ ಬರೆಸಿಕೊಳ್ಳಲಾಯಿತು.

ADVERTISEMENT

‘ಬಾಲ್ಯ ವಿವಾಹ ತಡೆದಿದ್ದೇವೆ. ಆದರೂ ಮುಹೂರ್ತ ದಿನ ನಾಳೆ ಆಗಿರುವುದರಿಂದ ನಾಳೆಯೂ ಪರಿಶೀಲನೆ ನಡೆಸುತ್ತೇವೆ. ಬಾಲ್ಯ ವಿವಾಹದಂಥ ಅನಿಷ್ಟ ಪದ್ಧತಿ ಎಲ್ಲೇ ನಡೆಯುತ್ತಿರುವ ಮಾಹಿತಿ ಇದ್ದರೂ ಉಚಿತ ದೂರವಾಣಿ ಸಂಖ್ಯೆ 1098ಕ್ಕೆ ಕರೆ ಮಾಡಬಹುದು’ ಎಂದು ಕೊಟ್ರೇಶ್ ಟಿ.ಎಂ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.