ADVERTISEMENT

ಪದವಿಯಲ್ಲಿ ಕನ್ನಡಕ್ಕೆ ಕತ್ತರಿ ಹಾಕುವುದಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 25 ಜೂನ್ 2021, 3:01 IST
Last Updated 25 ಜೂನ್ 2021, 3:01 IST
ರಾಷ್ಟ್ರೀಯ ನೂತನ ಶಿಕ್ಷಣ ನೀತಿ ಜಾರಿಯ ಹೆಸರಲ್ಲಿ ಪದವಿಯಲ್ಲಿ ಕನ್ನಡ ಕಡಿತಗೊಳಿಸುವುದನ್ನು ವಿರೋಧಿಸಿ ದಾವಣಗೆರೆ ವಿಶ್ವವಿದ್ಯಾಲಯದ ಕಾಲೇಜು ಕನ್ನಡ ಅಧ್ಯಾಪಕರ ವೇದಿಕೆಯು ಕುಲಪತಿ ಪ್ರೊ. ಎಸ್‌.ವಿ. ಹಲಸೆ ಅವರ ಮೂಲಕ ಉನ್ನತ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿತು.
ರಾಷ್ಟ್ರೀಯ ನೂತನ ಶಿಕ್ಷಣ ನೀತಿ ಜಾರಿಯ ಹೆಸರಲ್ಲಿ ಪದವಿಯಲ್ಲಿ ಕನ್ನಡ ಕಡಿತಗೊಳಿಸುವುದನ್ನು ವಿರೋಧಿಸಿ ದಾವಣಗೆರೆ ವಿಶ್ವವಿದ್ಯಾಲಯದ ಕಾಲೇಜು ಕನ್ನಡ ಅಧ್ಯಾಪಕರ ವೇದಿಕೆಯು ಕುಲಪತಿ ಪ್ರೊ. ಎಸ್‌.ವಿ. ಹಲಸೆ ಅವರ ಮೂಲಕ ಉನ್ನತ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿತು.   

ದಾವಣಗೆರೆ: ರಾಷ್ಟ್ರೀಯ ನೂತನ ಶಿಕ್ಷಣ ನೀತಿ-2020ರ ಜಾರಿ ಹಿನ್ನೆಲೆಯಲ್ಲಿ ಪ್ರಸ್ತಾಪಿಸಿರುವ ನಾಲ್ಕು ವರ್ಷಗಳ ಇಂಟಿಗ್ರೇಟೆಡ್ ಪದವಿ ಕೋರ್ಸ್‌ನಲ್ಲಿ ಕನ್ನಡವೂ ಸೇರಿದಂತೆ ಎಲ್ಲಾ ಭಾಷೆಗಳ ಅಧ್ಯಯನವನ್ನು ಒಂದು ವರ್ಷಕ್ಕೆ ಸೀಮಿತಗೊಳಿಸಿರುವ ಕ್ರಮವನ್ನು ಹಿಂತೆಗೆದುಕೊಂಡು ನಾಲ್ಕೂ ವರ್ಷಗಳಲ್ಲಿ ಕನ್ನಡ ಭಾಷೆಯ ಅಧ್ಯಯನಕ್ಕೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿ ದಾವಣಗೆರೆ ವಿಶ್ವವಿದ್ಯಾಲಯದ ಕಾಲೇಜು ಕನ್ನಡ ಅಧ್ಯಾಪಕರ ವೇದಿಕೆಯು ಕುಲಪತಿ ಪ್ರೊ. ಎಸ್‌.ವಿ. ಹಲಸೆ ಅವರ ಮೂಲಕ ಉನ್ನತ ಶಿಕ್ಷಣ ಸಚಿವರಿಗೆ ಮನವಿ ನೀಡಿ ಆಗ್ರಹಿಸಿದೆ.

ಪ್ರಸ್ತುತ ಜಾರಿಯಲ್ಲಿರುವ ಮೂರು ವರ್ಷಗಳ ಪದವಿಯಲ್ಲಿ ಮೊದಲ ಎರಡು ವರ್ಷ ಒಂದು ಭಾಷೆಯಾಗಿ ಕನ್ನಡವನ್ನು ಅಧ್ಯಯನ ಮಾಡಲು ಅವಕಾಶವಿದೆ. ಕನ್ನಡವನ್ನು ಓದುವುದೆಂದರೆ ವಿದ್ಯಾರ್ಥಿಗಳು ಪದವಿ ಹಂತದಲ್ಲಿ ಕನ್ನಡದ ಪರಂಪರೆ, ಚರಿತ್ರೆ ಮತ್ತು ಸಂಸ್ಕೃತಿಯನ್ನು ಕಲಿಯುತ್ತಲೇ ಸಂವಹನ ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳುವುದಾಗಿದೆ.

ಅಲ್ಲದೆ ತಾಯಿನುಡಿಯ ಮೂಲಕವೇ ಜಗತ್ತಿನ ವಿದ್ಯಮಾನಗಳನ್ನು ಅರಿತು ಕನ್ನಡದ ಅಸ್ಮಿತೆಯನ್ನು ಸಾರುವ ಮಹತ್ವದ ಸಾಧ್ಯತೆಗಳನ್ನು ನೂತನ ನೀತಿಯು ಅಲ್ಲಗಳೆದಂತಾಗುತ್ತದೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.

ADVERTISEMENT

ವೇದಿಕೆಯ ಕಾರ್ಯದರ್ಶಿ ಬಸಪ್ಪ ಎ.ಡಿ., ಪ್ರಾಧ್ಯಾಪಕರಾದ ಡಾ. ಎಚ್ ವಿಶ್ವನಾಥ್, ಡಾ. ಮಲ್ಲಿಕಾರ್ಜುನ, ಡಾ. ನಾರಾಯಣ ಸ್ವಾಮಿ, ಡಾ.ಮಂಜಣ್ಣ ಎಂ, ಪ್ರೊ. ಗಿರಿ ಸ್ವಾಮಿ ಎಚ್., ದಾದಾಪೀರ್ ನವಿಲೇಹಾಳ್ ಹಾಗೂ ಕುಲಸಚಿವರಾದ ಡಾ. ಗಾಯತ್ರಿ ದೇವರಾಜ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.