ತಗ್ಗಿಹಳ್ಳಿ (ನ್ಯಾಮತಿ): ತಾಯಿಯ ಸಾವಿನ ನಂತರ ಅಂಗಾಂಗಳನ್ನು ದಾನ ಮಾಡುವ ಮೂಲಕ ಮಕ್ಕಳು ನೋವಿನಲ್ಲೂ ಸಾರ್ಥಕ್ಯ ಕಂಡುಕೊಂಡಿದ್ದಾರೆ.
ತಗ್ಗಿಹಳ್ಳಿ ಗ್ರಾಮದ ಗಾಯತ್ರಮ್ಮ (55) ಅವರ ಅಂಗಾಂಗಗಳನ್ನು ದಾನ ಮಾಡಲಾಯಿತು.
ಕಳೆದ ಬುಧವಾರ ಮಿದುಳಿನಲ್ಲಿ ಅತಿ ಹೆಚ್ಚು ರಕ್ತಸ್ರಾವವಾಗಿ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆ, ನಂತರ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಿದುಳು ನಿಷ್ಕ್ರಿಯಗೊಂಡು ಗಾಯತ್ರಮ್ಮ ಅವರು ಶುಕ್ರವಾರ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರ ಚಲನೆ ಇರುವ ದೇಹದ ಉಳಿದ ಭಾಗದ ಅಂಗಾಂಗಳಾದ ಹೃದಯ, ಕಿಡ್ನಿ, ಲಿವರ್, ಶ್ವಾಸಕೋಶ ಮತ್ತು ಎರಡು ಕಣ್ಣಿನ ಕಾರ್ನಿಯಾವನ್ನು ಬೆಂಗಳೂರಿನ ಎಚ್ಎಎಲ್ ರಸ್ತೆಯಲ್ಲಿನ ಮಣಿಪಾಲ ಆಸ್ಪತ್ರೆಗೆ ದಾನ ಮಾಡಲು ಅವರ ಮಕ್ಕಳು ತೀರ್ಮಾನಿಸಿದರು. ಆ ಮೂಲಕ ಅಂಗಾಂಗ ಕಸಿ ಅವಶ್ಯಕತೆ ಇರುವ ರೋಗಿಗಳಿಗೆ ನೆರವಾದರು. ತಾಯಿಯ ಸಾವಿನ ದುಃಖದಲ್ಲೂ, ಸಾವನ್ನು ಸಾರ್ಥಕವಾಗಿಸಿದ ಮಕ್ಕಳ ಬಗ್ಗೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.
ಬೆಂಗಳೂರಿನ ಆರೋಗ್ಯ ಇಲಾಖೆಯ ಜೀವ ಸಾಕ್ಷರತಾ ಸಂಸ್ಥೆಗೆ ಅಂಗಾಂಗಳನ್ನು ಪಡೆಯಲು ಅನುಮತಿ ನೀಡಲಾಯಿತು. ಗ್ರಾಮದಲ್ಲಿ ಮಂಗಳವಾರ ಅಂತ್ಯಕ್ರಿಯೆ ನಡೆಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
ಅವರಿಗೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.