ಜಗಳೂರು:ಜಗತ್ತಿನಲ್ಲಿ ಶಾಶ್ವತವಾಗಿ ಶಾಂತಿ ನೆಲೆಸಬೇಕಿದ್ದಲ್ಲಿ ಮೊದಲು ಮಹಿಳಾ ವಿಮೋಚನೆ ಆಗಬೇಕು ಎಂದು ಸಿರಿಗೆರೆ ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಭಾನುವಾರ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ‘ಸ್ವರ್ಣಿಮ ಭಾರತದ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ’ ಕುರಿತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ತಾಯಿ ಸ್ಥಾನಕ್ಕೆ ವಿಶ್ವದಲ್ಲೇ ವಿಶಿಷ್ಟ ಸ್ಥಾನ ಇದೆ. ಮಾತೃವಾತ್ಸಲ್ಯದ ಯಶೋದೆ ಶ್ರೀಕೃಷ್ಣನಿಗೆ ದಂಡಿಸುತ್ತಾಳೆ ಎಂದರೆ ದೇವರಿಗೆ ತತ್ಸಮಾನ ಎಂದರ್ಥ. ದೇವರಿಗೆ ಸರಿಸಮಾನ ಅಂದರೆ ಹೆಣ್ಣು ಮಾತ್ರ. ಎಲ್ಲಾ ಧರ್ಮಗಳ ಸಾರವೂ ಮಾನವೀಯತೆ ಹಾಗೂ ಅಧ್ಯಾತ್ಮದಿಂದ ಕೂಡಿದೆ. ಪ್ರಜಾಪಿತ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗಿನಿಯರು ಸಾಂಸಾರಿಕ ಜೀವನಕ್ಕೆ ಅಂಟಿಕೊಳ್ಳದೆ ಆಧ್ಯಾತ್ಮಿಕತೆಯ ಮೂಲಕ ಸಮಾಜದಲ್ಲಿ ಶಾಂತಿ ನೆಲೆಸಲು ಕಾರಣರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಶ್ವವಿದ್ಯಾಲಯದ ವೀಣಾ ಮಾತನಾಡಿ, ‘ಪ್ರತಿಯೊಬ್ಬ ಮಹಿಳೆಗೆ ಆತ್ಮವಿಶ್ವಾಸ ತುಂಬುವ ಕೆಲಸವಾಗಬೇಕು’ ಎಂದು ಹೇಳಿದರು.
ಮಾಜಿ ಶಾಸಕ ಎಚ್.ಪಿ. ರಾಜೇಶ್ ಮಾತನಾಡಿ, ‘ಸಿರಿಗೆರೆಶ್ರೀಗಳ ಆಶೀರ್ವಾದದಿಂದ ಬರದನಾಡು ಜಗಳೂರು ತಾಲ್ಲೂಕಿಗೆ ತುಂಗಭದ್ರೆ ಹರಿಯಲಿದ್ದಾಳೆ. ಅಧಿಕಾರ, ಸ್ವಾರ್ಥ ಹಾಗೂ ಲಾಲಸೆ ಬಿಟ್ಟು ಶಿವಪಥದಲ್ಲಿ ನಡೆಯೋಣ’ ಎಂದರು.
ಫಾದರ್ ವಿಲಿಯಂ ಮಿರಾಂದ, ಪುಷ್ಪಾ ಲಕ್ಷ್ಮಣಸ್ವಾಮಿ, ಶಾಹೀನಾಬೇಗಂ, ಸಿಪಿಐ ಮಂಜುನಾಥ್ ಪಂಡಿತ್, ಗೀತಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.