ADVERTISEMENT

ರಾಮ ಜನ್ಮಭೂಮಿ ಕುರಿತ ಸುಪ್ರೀಂ ಕೋರ್ಟ್‌ ತೀರ್ಪಿಗೆ ಮುತಾಲಿಕ್‌ ಸ್ವಾಗತ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2019, 9:52 IST
Last Updated 9 ನವೆಂಬರ್ 2019, 9:52 IST
ಪ್ರಮೋದ ಮುತಾಲಿಕ್‌
ಪ್ರಮೋದ ಮುತಾಲಿಕ್‌   

ದಾವಣಗೆರೆ: ‘ಅಯೋಧ್ಯೆ ರಾಮ ಜನ್ಮಭೂಮಿ ಕುರಿತ ಸುಪ್ರೀಂ ಕೋರ್ಟ್ ತೀರ್ಪನ್ನು ಶ್ರೀರಾಮ ಸೇನೆ ಸ್ವಾಗತಿಸುತ್ತದೆ’ ಎಂದು ಸಂಘಟನೆಯಸಂಸ್ಥಾಪಕ ಪ್ರಮೋದ ಮುತಾಲಿಕ್ ಹೇಳಿದರು.

ನಗರದ ಸಿದ್ದವೀರಪ್ಪ ಬಡಾವಣೆಯಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘ರಾಮ ಜನ್ಮಭೂಮಿ ಹೋರಾಟ 500 ವರ್ಷಗಳಿಗಿಂತಲೂ ಹಳೆಯದ್ದಾಗಿದೆ. ಸುಪ್ರೀಂ ಕೋರ್ಟ್ ತೀರ್ಪನ್ನು ಸಂಪೂರ್ಣವಾಗಿ ಸ್ವಾಗತಿಸುತ್ತೇವೆ’ ಎಂದು ಹೇಳಿದರು.

‘ವಿಶ್ವ ಹಿಂದೂ ಪರಿಷತ್ತಿನ ರಾಮ ಜನ್ಮಭೂಮಿ ನ್ಯಾಸ ಮಂಚ್ ಟ್ರಸ್ಟ್‌ ಇದೆ. ಈಗಾಗಲೇ ಮಂದಿರ ನಿರ್ಮಿಸಲು ಕಂಬಗಳು, ಗೋಡೆಗಳು, ಚಾವಣಿ ಸಿದ್ಧವಾಗಿದೆ. ಆರು ತಿಂಗಳ ಒಳಗೆ ದೇವಸ್ಥಾನ ನಿರ್ಮಾಣ ಮಾಡಬೇಕು. ಹೀಗಾಗಿ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಲು ಕೇಂದ್ರ ಸರ್ಕಾರವು ಜಾಗವನ್ನು ಕೂಡಲೇ ಟ್ರಸ್ಟ್‌ಗೆ ಒಪ್ಪಿಸಬೇಕು’ ಎಂದು ಮುತಾಲಿಕ್ ಒತ್ತಾಯಿಸಿದರು.

ಮುತಾಲಿಕ್‌ ಬಂದಿರುವ ವಿಚಾರ ತಿಳಿಯುತ್ತಿದ್ದಂತೆ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಬಂದು ಜಮಾವಣೆಗೊಂಡರು. ಬಹಿರಂಗವಾಗಿ ಯಾವುದೇ ರೀತಿಯ ಸಂಭ್ರಮಾಚರಣೆ ಮಾಡದಂತೆ ಪೊಲೀಸರು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.