ದಾವಣಗೆರೆ: ಜಗಳೂರಿನ ಸಜ್ಜನ ರಾಜಕಾರಣಿ ದಿ. ಜೆ. ಮಹಮ್ಮದ್ ಇಮಾಂ ಅವರ ನೆನಪಿಗಾಗಿ ಕೊಡಮಾಡುವ ‘ಮಹಮ್ಮದ್ ಇಮಾಂ ಸ್ಮಾರಕ ರಾಜ್ಯ ಮಟ್ಟದ ವಾರ್ಷಿಕ ಪ್ರಶಸ್ತಿ’ ಪ್ರದಾನ ಸಮಾರಂಭ ಫೆ. 14ರಂದು ಹಮ್ಮಿಕೊಳ್ಳಲಾಗಿದೆ ಎಂದು ಜೆ.ಎಂ. ಇಮಾಂ ಟ್ರಸ್ಟ್ ಅಧ್ಯಕ್ಷ ಜೆ.ಕೆ. ಹುಸೇನ್ಮಿಯಾ ಸಾಬ್ ಹೇಳಿದರು.
ಅಂದು ಸಂಜೆ 5ಕ್ಕೆ ಜಗಳೂರಿನ ಸಂತ ಶಿಶುನಾಳ ಷರೀಪ್ ಸಾಹೇಬರ ರಂಗಮಂದಿರದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸುವರು.ಜೆ.ಕೆ. ಹುಸೇನ್ಮಿಯಾ ಸಾಬ್ ಅಧ್ಯಕ್ಷತೆ ವಹಿಸುವರು. ಶಾಸಕ ಎಸ್.ವಿ. ರಾಮಚಂದ್ರ ಭಾಗವಹಿಸುವರು. ಪ್ರಾಧ್ಯಾಪಕ ಡಾ.ಆರ್. ರಂಗಪ್ಪ ಪರಿಚಯ ಮಾಡಿಕೊಡುವರು. ಪ್ರಾಚಾರ್ಯ ದಾದಾಪೀರ್ ನವಿಲೇಹಾಳ್ ಅಭಿನಂದನಾ ನುಡಿಗಳನ್ನಾಡುವರು ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ಸಾಹಿತಿ ಎನ್. ಟಿ. ಯರ್ರಿಸ್ವಾಮಿ, ‘ರಾಜಕಾರಣ ಕ್ಷೇತ್ರದಲ್ಲಿ ಮಾಜಿ ಸಚಿವ ಎಚ್. ಏಕಾಂತಯ್ಯ, ಕೃಷಿ–ಸಾ.ಚ. ವೀರಭದ್ರಪ್ಪ, ಶಿಕ್ಷಣ– ಪ್ರೇಮಾ ನಾಗರಾಜ್, ಸಾಹಿತ್ಯ–ಡಿ.ಬಿ. ರಜಿಯಾ, ಸಾಂಸ್ಕೃತಿಕ– ರಂಗನಾಥಸ್ವಾಮಿ ಯಕ್ಷಗಾನ ಕಲಾವಿದರ ಸಂಘ, ವೈದ್ಯಕೀಯ– ಡಾ. ಇಬ್ರಾಹಿಂ ನಾಗನೂರು ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಪ್ರಶಸ್ತಿ ತಲಾ ₹ 10 ಸಾವಿರ ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ’ ಎಂದು ತಿಳಿಸಿದರು.
ಪ್ರಶಸ್ತಿ ಸಲಹಾ ಸಮಿತಿಯ ಡಿ.ಸಿ. ಮಲ್ಲಿಕಾರ್ಜುನ, ಹಾಲಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.