ಮಲೇಬೆನ್ನೂರು: ಹೋಬಳಿ ವ್ಯಾಪ್ತಿಯಲ್ಲಿ ಸೂಳೆಕೆರೆ ಹಳ್ಳ ನೀರಿಲ್ಲದೆ ಬತ್ತಿಹೋಗಿದ್ದು, ದೇವರಬೆಳಕೆರೆ ಪಿಕಪ್ ಜಲಾಶಯದ ಕ್ರಸ್ಟ್ಗೇಟ್ ಎತ್ತಿ ನೀರು ಹರಿಸಬೇಕು ಎಂದು ಒತ್ತಾಯಿಸಿ ರೈತರು ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ನೇತೃತ್ವದಲ್ಲಿ ಶುಕ್ರವಾರ ಎಇಇ ಧನಂಜಯ ಅವರಿಗೆ ಮನವಿ ಸಲ್ಲಿಸಿದರು.
ದೇವರಬೆಳಕೆರೆ ಅಣೆಕಟ್ಟೆ ಕೆಳಭಾಗದ ನಂದಿತಾವರೆ, ಕುಣಿಬೆಳೆಕೆರೆ, ಬ್ಯಾಲದಹಳ್ಳಿ, ರಾಮತೀರ್ಥ ಭಾಗದ ತೋಟಗಳು ಬಿಸಿಲಿಗೆ ಒಣಗಿವೆ. ಕೊಳವೆಬಾವಿ ಕೈಕೊಟ್ಟ ಕಾರಣ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆ ಎದುರಾಗಿದೆ. ಹಿಂದೆ ಹಳ್ಳ ಒಣಗಿದಾಗ ಪಿಕಪ್ ಜಲಾಶಯದ ಕ್ರಸ್ಟ್ಗೇಟ್ ತೆಗೆದು ಅಡಿಕೆ, ಬಾಳೆ, ವೀಳ್ಯದ ಎಲೆ ತೋಟಗಳ ನೀರು ಹರಿಸಲಾಗಿತ್ತು. ಈಗ ಆ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ರೈತರಾದ ಮಲ್ಲೇಶಪ್ಪ, ಅಂಜನಪ್ಪ ಒತ್ತಾಯಿಸಿದರು.
ರೈತರ ಮನವಿ ಆಲಿಸಿದ ಎಇಇ ಧನಂಜಯ, ‘ಡ್ಯಾಂನಿಂದ ನೀರು ಹರಿಸುವ ಅಧಿಕಾರ ನಮಗೆ ಇಲ್ಲ. ಈಗಾಗಲೇ ಭದ್ರಾ ನಾಲೆ ನೀರು ಹರಿಸುವ ಸಮಸ್ಯೆ ಎದುರಿಸುತ್ತಿದ್ದೇವೆ. ಪಿಕಪ್ ಮೇಲ್ಭಾಗದ ರೈತರು, ನೀರನ್ನು ವ್ಯರ್ಥಮಾಡದೆ ಬೇಸಿಗೆ ವೇಳೆ ಕುಡಿಯುವ ನೀರಿಗೆ ಸಂರಕ್ಷಿಸಬೇಕು. ಹಿಂದೆ ಯಾವ ರೀತಿ ನೀರು ಹರಿಸಿದ್ದರು ಎಂಬ ದಾಖಲೆ ಪರಿಶೀಲಿಸುತ್ತೇನೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.