ADVERTISEMENT

ಅಗತ್ಯ ಸೇವೆ ನಿರಾತಂಕವಾಗಿ ನೀಡಿ

ವ್ಯಾಪಾರಿಗಳಿಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸೂಚನೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2020, 16:40 IST
Last Updated 27 ಮಾರ್ಚ್ 2020, 16:40 IST

ದಾವಣಗೆರೆ:ಅವಶ್ಯಕ ಸೇವೆಗಳನ್ನು ಯಾವುದೇ ಆತಂಕ ಇಲ್ಲದೇ ವಿತರಿಸಿ. ಅವಶ್ಯಕ ವಸ್ತುಗಳನ್ನು ತಾವು ಸರಬರಾಜು ಮಾಡಿಕೊಳ್ಳುವ ಜಾಗದಿಂದ ಯಾವುದೇ ತೊಂದರೆ ಇದ್ದಲ್ಲಿ ತಕ್ಷಣ ನಮ್ಮ ಗಮನಕ್ಕೆ ತರಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ವರ್ತಕರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದರು.

ವರ್ತಕರ ಸಂಘದ ಕಾರ್ಯದರ್ಶಿ ಶಂಭುಲಿಂಗಪ್ಪ, ‘ಈಗ ನಮ್ಮಲ್ಲಿ ಲಭ್ಯವಿರುವ ದಾಸ್ತಾನು ಮೂರು ದಿನಗಳಿಗೆ ಸಾಕಾಗಲಿದ್ದು, ಬೇಳೆ, ಎಣ್ಣೆ ಮತ್ತು ಮಸಾಲೆ ಪದಾರ್ಥಗಳು ಹೊರಗಿನಿಂದ ಬರಬೇಕಿದೆ. ಅಲ್ಲಿಯೂ ಕಾರ್ಮಿಕರ ಕೊರತೆಯಿಂದ ಲಾರಿಗಳು ಓಡಾಡುತ್ತಿಲ್ಲ. ಇಲ್ಲಿ ಬರುವ ಲಾರಿ ಚಾಲಕರು ಹಾಗೂ ಕ್ಲೀನರ್‌ಗಳಿಗೆ ಊಟದ ಸಮಸ್ಯೆ ಇದೆ. ಹಾಗಾಗಿ ಅವರು ಬರಲು ಹಿಂದೇಟು ಹಾಕುತ್ತಿದ್ದಾರೆ ಎಂದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ಬಿ.ಜಿ.ಅಜಯಕುಮಾರ್, ‘ಇಂದು ಹೋಟೆಲ್ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ನಾಳೆಯಿಂದ ಅಲ್ಲಲ್ಲಿ ಕನಿಷ್ಠ 25 ಹೋಟೆಲ್‍ಗಳನ್ನು ತೆರೆಯಲು ಒಪ್ಪಿಕೊಂಡಿದ್ದು, ಈ ಹೋಟೆಲ್‍ಗಳ ವಿವರವನ್ನು ತಿಳಿಸಲಾಗುವುದು’ ಎಂದರು.

ಅವಲಕ್ಕಿ ಹಾಗೂ ಮಂಡಕ್ಕಿ ಮಿಲ್‍ಗಳನ್ನು ನಾಳೆಯಿಂದಲೇ ಆರಂಭಿಸಲು ಆದೇಶಿಸಿದ್ದು, ಎಲ್ಲ ಅವಶ್ಯಕ ಸೇವೆಗಳು ನಿರಾಂತಕವಾಗಿ ಸಾರ್ವಜನಿಕರಿಗೆ ಲಭಿಸಲಿವೆ. ಯಾವುದೇ ಆತಂಕಕ್ಕೆ ಒಳಗಾಗಬೇಕಿಲ್ಲಎಂದು ಜಿಲ್ಲಾಧಿಕಾರಿ ತಿಳಿಸಿದರು.

‘ಗಂಗಾವತಿ, ರಾಯಚೂರು, ಕೊಪ್ಪಳ ಭಾಗದಿಂದ ಅಕ್ಕಿ ಸರಬರಾಜಾಗಲಿದ್ದು, ಆ ಭಾಗದ ಡಿಸಿ ಹಾಗೂ ಗೋಧಿ ಬರುವ ರಾಜಸ್ಥಾನದ ಜಿಲ್ಲಾಧಿಕಾರಿ ಜೊತೆ ಚರ್ಚಿಸುತ್ತೇನೆ’ ಎಂದರು.

ವರ್ತಕರ ಸಂಘದ ಪದಾಧಿಕಾರಿಗಳು, ಕಾರ್ಮಿಕರಿಗೆ ಒಂದು ಸಾವಿರ ಮಾಸ್ಕ್ ಮತ್ತು ಸ್ಯಾನಿಟೈಸರ್‌ ಒದಗಿಸುವಂತೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.