ಹೊನ್ನಾಳಿ: ತಾಲ್ಲೂಕಿನಲ್ಲಿ ಹುಚ್ಚುನಾಯಿಯೊಂದು ಮೂರು ದಿನಗಳಲ್ಲಿ 27 ಜನರಿಗೆ ಕಚ್ಚಿ ಗಾಯಗೊಳಿಸಿದೆ.
ಸೆ. 8ರಂದು ರಾತ್ರಿ ವೇಳೆ 19 ಜನರಿಗೆ ಹುಚ್ಚು ನಾಯಿ ಕಚ್ಚಿದೆ. ನಾಯಿ ಕಡಿತಕ್ಕೊಳಗಾದ ಗಾಯಾಳುಗಳು ತಕ್ಷಣವೇ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಸೆ. 9 ರಂದು ಮಂಗಳವಾರ ಸಂಜೆ ಕೂಡಾ ಇದೇ ನಾಯಿ ಅಂದಾಜು 8 ಜನರಿಗೆ ಕಚ್ಚಿದೆ.
ಹುಚ್ಚುನಾಯಿ ಕಚ್ಚಿದ ಎಲ್ಲ 27 ಜನರಿಗೂ ಆಂಟಿ ರೇಬಿಸ್ ವ್ಯಾಕ್ಸಿನ್ (ಎಆರ್ವಿ) ಮತ್ತು ರೇಬಿಸ್ ಇಮ್ಯೂನ್ಯೂ ಗ್ಲೋಬೋಲಿನ್ (ಆರ್ಐಜಿ) ಎಂಬ ಎರಡೂ ತರಹದ ಇಂಜೆಕ್ಷನ್ಗಳನ್ನು ನೀಡಲಾಗಿದೆ ಎಂದು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಚಂದ್ರಪ್ಪ ತಿಳಿಸಿದ್ದಾರೆ.
ಹುಚ್ಚುನಾಯಿ ಕಚ್ಚಿದ ಸುದ್ದಿ ಎಲ್ಲೆಡೆ ಹರಡುತ್ತಿದ್ದಂತೆ ಎಚ್ಚೆತ್ತುಕೊಂಡ ಪುರಸಭೆ ಮುಖ್ಯಾಧಿಕಾರಿ ಟಿ.ಲೀಲಾವತಿ ಅವರು ನಾಯಿ ಸೆರೆ ಹಿಡಿಯಲು ಸಿಬ್ಬಂದಿಗೆ ಸೂಚಿಸಿದರು. ಸಿಬ್ಬಂದಿ ಹುಡುಕಾಟ ನಡೆಸಿದರೂ ಹುಚ್ಚು ನಾಯಿ ಎಲ್ಲಿಯೂ ಕಂಡು ಬಂದಿಲ್ಲ, ಅದೇ ಸಮಯದಲ್ಲಿ ಇನ್ನೊಂದು ನಾಯಿ ಕೂಡಾ ಕಚ್ಚಿದ ಮಾಹಿತಿ ಸಿಕ್ಕಿದ್ದು, ಅದನ್ನು ಸೆರೆಹಿಡಿದಿದ್ದಾರೆ.
ಪುರಸಭೆ ಪ್ರಕಟಣೆ: ‘ಸಾರ್ವಜನಿಕರು ತಮ್ಮ ಮನೆಯಲ್ಲಿನ ಮಿಕ್ಕಿದ ಅಡುಗೆ ಪದಾರ್ಥಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಿರುವುದು ಕಂಡುಬಂದಿದೆ. ಇದರಿಂದ ನಾಯಿಗಳು, ಹಂದಿಗಳು, ಬಿಡಾಡಿ ದನಗಳ ಕಾಟ ಹೆಚ್ಚಾಗಿದೆ. ಸಾರ್ವಜನಿಕರು ಅಡುಗೆ ಪದಾರ್ಥಗಳನ್ನು ಎಲ್ಲೆಂದರಲ್ಲಿ ಎಸೆಯದೇ ಕಸದ ಗಾಡಿಗಳಿಗೆ ಹಾಕಿ ಸ್ವಚ್ಛತೆ ಕಾಪಾಡಿಕೊಂಡಲ್ಲಿ ನಾಯಿಗಳ ಉಪಟಳ ಕಡಿಮೆಯಾಗುತ್ತದೆ’ ಎಂದು ಮುಖ್ಯಾಧಿಕಾರಿ ಟಿ. ಲೀಲಾವತಿ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.