ಹರಿಹರ: ತಾಲ್ಲೂಕಿನಾದ್ಯಂತ 2 ದಿನಗಳಿಂದ ಸುರಿಯುತ್ತಿರುವ ಪುನರ್ವಸು ಮಳೆಗೆ 6 ಮನೆಗಳಿಗೆ ಹಾನಿಯಾಗಿದೆ.
ಶನಿವಾರ ಸಂಜೆಯಿಂದ ಎಡೆಬಿಡದೆ ಅವ್ಯಾಹತವಾಗಿ ಸುರಿಯುತ್ತಿರುವ ಮಳೆಗೆ ತಾಲ್ಲೂಕಿನ ಕೊಂಡಜ್ಜಿ ಗ್ರಾಮದಲ್ಲಿ ಎರಡು, ಹಟ್ಟಿ ಗ್ರಾಮದಲ್ಲಿ ಒಂದು ಸೇರಿ ಗ್ರಾಮಾಂತರ ಪ್ರದೇಶದ 4 ಹಾಗೂ ನಗರ ಪ್ರದೇಶದ ಭರತ್ ಆಯಿಲ್ ಮಿಲ್ ಕಾಂಪೌಂಡಿನಲ್ಲಿ 2 ಮನೆಗಳಿಗೆ ಹಾನಿಯಾಗಿದೆ.
ಸಾಲಕಟ್ಟಿ ಗ್ರಾಮದ ಎ.ಕೆ. ಅಜ್ಜಪ್ಪ, ದೀಟೂರು ಗ್ರಾಮದ ಕಾಶಿನಾಥ, ಕೊಂಡಜ್ಜಿ ಗ್ರಾಮದ ಅಂಜಿನಪ್ಪ, ನಗರದ ಭಾರತ್ ಆಯಿಲ್ ಮಿಲ್ ಕಾಂಪೌಂಡಿನ ಗಂಗಮ್ಮ ಮತ್ತು ಶೋಭಾ ಅವರ ಮನೆಯ ಚಾವಣಿ ಕುಸಿದು ಬಿದ್ದಿವೆ ಎಂದು ರಾಜಸ್ವ ನಿರೀಕ್ಷಕ ಸಮೀರ್ ಅಹಮದ್, ಆನಂದ್, ಗ್ರಾಮ
ಲೆಕ್ಕಿಗರಾದ ಎಚ್.ಜಿ. ಹೇಮಂತ್, ಲೋಹಿತ್ ಮತ್ತು ಸುರೇಶ್ ತಿಳಿಸಿದರು.
ತುಂಬಿ ಹರಿಯುತ್ತಿರುವ ಹಳ್ಳ: ಸತತ ಮಳೆಯಿಂದಾಗಿ ಸಾರಥಿ-ಪಾಮೇನಹಳ್ಳಿ ಮಧ್ಯದಲ್ಲಿರುವ ಹಳ್ಳವು ತುಂಬಿ ಹರಿಯುತ್ತಿದ್ದು, ಎರಡು ಗ್ರಾಮಗಳ ಸಂಪರ್ಕ ಕಡಿತವಾಗಿದೆ.
ಸುತ್ತಮುತ್ತಲ ಹಾಗೂ ತಾಲ್ಲೂಕಿನ ಬಹುತೇಕ ಹೊಲ ಗದ್ದೆಗಳು ನೀರಿನಿಂದ ತುಂಬಿ ಹರಿಯುತ್ತಿದ್ದು, ಬೆಳೆ ಹಾನಿಯಾಗಿಲ್ಲ ಎಂದು ಸಹಾಯಕ ಕೃಷಿ ಅಧಿಕಾರಿ ಗೋವರ್ಧನ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.