ADVERTISEMENT

ದಾವಣಗೆರೆ ಜಿಲ್ಲೆಯಲ್ಲಿ ಸುರಿದ ಮಳೆ: ಭತ್ತದ ಬೆಳೆಗೆ ಹಾನಿ

​ಪ್ರಜಾವಾಣಿ ವಾರ್ತೆ
Published 19 ಮೇ 2024, 15:20 IST
Last Updated 19 ಮೇ 2024, 15:20 IST
ದಾವಣಗೆರೆ ತಾಲ್ಲೂಕಿನ ದೊಡ್ಡಬಾತಿಯಲ್ಲಿ ಮಳೆ ಗಾಳಿಗೆ ಭತ್ತ ಚಾಪೆ ಹಾಸಿರುವುದು.
ದಾವಣಗೆರೆ ತಾಲ್ಲೂಕಿನ ದೊಡ್ಡಬಾತಿಯಲ್ಲಿ ಮಳೆ ಗಾಳಿಗೆ ಭತ್ತ ಚಾಪೆ ಹಾಸಿರುವುದು.   

ದಾವಣಗೆರೆ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶನಿವಾರ ರಾತ್ರಿಯಿಂದ ಭಾನುವಾರ ಬೆಳಗಿನ ಜಾವದವರೆಗೆ ಕೆಲವೆಡೆ ಧಾರಾಕಾರ ಮಳೆ ಸುರಿದಿದೆ.

ಭಾನುವಾರ ಮಧ್ಯಾಹ್ನವೂ ಮಳೆ ಸುರಿಯಿತು. ಮಳೆಯಿಂದಾಗಿ ನಗರದ ರಸ್ತೆಗಳಲ್ಲಿ ನೀರು ತುಂಬಿಕೊಂಡಿದ್ದು, ಇದರಿಂದಾಗಿ ಸಾರ್ವಜನಿಕರು, ಬೈಕ್ ಸವಾರರು ಸಂಚರಿಸಲು ಹರಸಾಹಸಪಡಬೇಕಾಯಿತು.

ದಾವಣಗೆರೆ ತಾಲ್ಲೂಕಿನ ಕಾಡಜ್ಜಿಯಲ್ಲಿ ಭಾನುವಾರ 3 ಸೆಂ.ಮೀ, ಅಣಜಿಯಲ್ಲಿ 1 ಸೆಂ.ಮೀ, ಮಾಯಕೊಂಡದಲ್ಲಿ ಒಂದು ಸೆಂ.ಮೀ ಸೇರಿದಂತೆ ಒಟ್ಟು 7 ಸೆಂ.ಮೀ ಮಳೆಯಾಗಿದೆ. 

ADVERTISEMENT

ಮಳೆಗೆ ಭತ್ತದ ಬೆಳೆ ನಾಶ

ಶನಿವಾರ ರಾತ್ರಿ ಸುರಿದ ಗಾಳಿ ಮಳೆಗೆ ದೊಡ್ಡಬಾತಿಯ ಹಲವು ಗದ್ದೆಗಳಲ್ಲಿ ಕೊಯ್ಲಿಗೆ ಬಂದಿದ್ದ ಭತ್ತದ ಬೆಳೆಯು ಛಾಪೆ ಹಾಸಿದಂತಾಗಿದೆ. ಗ್ರಾಮದ ಉಮೇಶ್ ಅವರ ಒಂದುವರೆ ಎಕರೆ ಪ್ರದೇಶದಲ್ಲಿ ಕೊಯ್ಲಿಗೆ ಬಂದಿದ್ದ ಭತ್ತದ ಬೆಳೆ ನೆಲಕಚ್ಚಿದೆ.

‘ಬಡ್ಡಿ ಸಾಲ ಮಾಡಿ ₹ 50 ಸಾವಿರ ಖರ್ಚು ಮಾಡಿ ಭತ್ತ ಬೆಳೆದಿದ್ದೇನೆ. ಬೆಳೆ ನಾಶವಾಗಿದೆ. ಅಧಿಕಾರಿಗಳು ಈವರೆಗೆ ಯಾರೂ ಬಂದಿಲ್ಲ. ರೈತರ ಕಷ್ಟ ಕೇಳುವವರು ಇಲ್ಲವಾಗಿದ್ದಾರೆ’ ಎಂದು ಉಮೇಶ್ ಅಳವಲು ತೋಡಿಕೊಂಡರು.

ಜಿಲ್ಲೆಯಲ್ಲಿ ಭಾನುವಾರ ಬೆಳಿಗ್ಗೆ 8.30ರ ವೇಳೆಗೆ ವಾಡಿಕೆ ಮಳೆ 2.8 ಮಿ.ಮೀಗೆ ಸರಾಸರಿ 6 ಮಿ.ಮೀ ಮಳೆಯಾಗಿದೆ. ಚನ್ನಗಿರಿಯಲ್ಲಿ 8, ದಾವಣಗೆರೆ ತಾಲ್ಲೂಕಿನಲ್ಲಿ 7.7 ಮಿ.ಮೀ, ಹರಿಹರದಲ್ಲಿ 3.8 ಮಿ.ಮೀ, ಹೊನ್ನಾಳಿಯಲ್ಲಿ 8.5 ಮಿ.ಮೀ, ಜಗಳೂರಿನಲ್ಲಿ 1 ಮಿ.ಮೀ. ಹಾಗೂ ನ್ಯಾಮತಿಯಲ್ಲಿ ಸರಾಸರಿ 7.4 ಮಿ.ಮೀ ಮಳೆ ಸುರಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.