ADVERTISEMENT

ಕಾರ್ಗಿಲ್ ಕಾರ್ಮಿಕರ ಹೋರಾಟಕ್ಕೆ ರೈತ ಸಂಘದ ಬೆಂಬಲ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 4:34 IST
Last Updated 10 ಫೆಬ್ರುವರಿ 2026, 4:34 IST
ಹರಿಹರ ತಾಲ್ಲೂಕಿನ ಬೆಳ್ಳೂಡಿ ಸಮೀಪದ ಕಾರ್ಗಿಲ್ ಕಂಪನಿಯ ಕಾರ್ಮಿಕರ ಹೋರಾಟಕ್ಕೆ ರೈತ ಸಂಘದ ಮುಖಂಡರು ಬೆಂಬಲ ಸೂಚಿಸಿದರು
ಹರಿಹರ ತಾಲ್ಲೂಕಿನ ಬೆಳ್ಳೂಡಿ ಸಮೀಪದ ಕಾರ್ಗಿಲ್ ಕಂಪನಿಯ ಕಾರ್ಮಿಕರ ಹೋರಾಟಕ್ಕೆ ರೈತ ಸಂಘದ ಮುಖಂಡರು ಬೆಂಬಲ ಸೂಚಿಸಿದರು   

ಹರಿಹರ: ತಾಲ್ಲೂಕಿನ ಬೆಳ್ಳೂಡಿ ಸಮೀಪದ ಕಾರ್ಗಿಲ್ ಕಂಪನಿಯ ಕಾರ್ಮಿಕರು ನಡೆಸುತ್ತಿರುವ ಅಹೋರಾತ್ರಿ ಹೋರಾಟ ಸೋಮವಾರಕ್ಕೆ 4ನೇ ದಿನಕ್ಕೆ ಮುಂದುವರಿದಿದ್ದು ವಿವಿಧ ಸಂಘ, ಸಂಸ್ಥೆಗಳ ಮುಖಂಡರು ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದರು.

‘ಈ ಕಾರ್ಖಾನೆ ಕೇವಲ ಕಾರ್ಮಿಕರಿಗಷ್ಟೇ ಆಧಾರವಾಗಿಲ್ಲ, ಮೆಕ್ಕೆಜೋಳ ಬೆಳೆಯುತ್ತಿರುವ ಮಧ್ಯ ಕರ್ನಾಟಕದ ಸಾವಿರಾರು ರೈತರಿಗೂ ಆಧಾರವಾಗಿದೆ. ಆಡಳಿತ ಮಂಡಳಿಯ ತಪ್ಪು ನಿರ್ಧಾರಗಳಿಂದಾಗಿ ಕಾರ್ಮಿಕರೂ ಹಾಗೂ ರೈತರ ಹಿತಾಸಕ್ತಿಗೆ ಧಕ್ಕೆ ಬಂದಿದೆ. ಆಡಳಿತ ಮಂಡಳಿ ತಮ್ಮ ನಿರ್ಧಾರಗಳಿಂದ ಹಿಂದೆ ಸರಿಯಬೇಕು’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಕುರುವ ಗಣೇಶ್ ಆಗ್ರಹಿಸಿದರು.

‘ಅಕ್ರಮವಾಗಿ ಮಾರಾಟ ಮಾಡುವುದು ಸೂಕ್ತವಲ್ಲ, ಕಂಪನಿ ಆಡಳಿತ ಮಂಡಳಿಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ವಾಸ್ತವವನ್ನು ಪರಿಶೀಲಿಸಬೇಕು. ತಪ್ಪಿದರೆ ಕಾರ್ಮಿಕರ ಹೋರಾಟಕ್ಕೆ ರೈತ ಸಮುದಾಯವು ಬೀದಿಗಿಳಿದು ಹೋರಾಟ ಮಾಡುತ್ತದೆ’ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಹೊನ್ನೂರು ಮುನಿಯಪ್ಪ ಹೇಳಿದರು.

ADVERTISEMENT

‘ಸರ್ಕಾರ ಮತ್ತು ಕಂಪನಿ ಆಡಳಿತ ಮಂಡಳಿಗಳ ಪ್ರಾಕೃತಿಕ ನ್ಯಾಯದ ವಿರುದ್ಧದ ನೀತಿಯನ್ನು ಜನ ಸಾಮಾನ್ಯರು ಒಗ್ಗಟ್ಟಿನ ಹೋರಾಟದ ಮೂಲಕ ಬದಲಿಸಬೇಕು. ನೂರಾರು ಕಾರ್ಮಿಕರು, ಸಾವಿರಾರು ರೈತರ ಬದುಕಿಗೆ ಆಧಾರವಾಗಿರುವ ಕಂಪನಿಯನ್ನು ದುರುಪಯೋಗ ಮಾಡಿಕೊಳ್ಳಲು ಅವಕಾಶ ನೀಡುವುದಿಲ್ಲ’ ಎಂದು ಪೀಪಲ್ಸ್ ಲಾಯರ್ಸ್ ಗಿಲ್ಡ್ ರಾಜ್ಯ ಸಂಚಾಲಕ ಅನೀಸ್ ಪಾಷಾ ಹೇಳಿದರು.

ಕಂಪನಿ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಮಂಜುನಾಥ ಕೈದಾಳೆ, ಅಧ್ಯಕ್ಷ ಸಂಜಯ್ ಜೆ., ಪ್ರಧಾನ ಕಾರ್ಯದರ್ಶಿ ಮೋಹನ್, ಪದಾಧಿಕಾರಿಗಳಾದ ಬಸವರಾಜ ಕೆ.ಜಿ., ಅರುಣ್ ಮಾಕನೂರು, ಬಿ.ಎಚ್.ಉದುಕುಮಾರ್, ಮಲ್ಲಿಕಾರ್ಜುನ್ ಕೆ.ಆರ್., ಅಪ್ಸರ್ ಖಾನ್ ಹಾಗೂ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.