ADVERTISEMENT

ಹೊಸನಗರ ರೈತನ ಕೈಹಿಡಿದ ಸುಗಂಧರಾಜ- ಎಲ್ಲ ಕಾಲದಲ್ಲೂ ಸಿಗುವ ಹೂಗಳಿಗೆ ಬೇಡಿಕೆ ಕಾಯಂ

ಎನ್.ವಿ.ರಮೇಶ್
Published 3 ನವೆಂಬರ್ 2021, 6:54 IST
Last Updated 3 ನವೆಂಬರ್ 2021, 6:54 IST
ಬಸವಾಪಟ್ಟಣ ಸಮೀಪದ ಹೊಸನಗರದ ರೈತ ಸಿದ್ಧಪ್ಪ ಬೆಳೆದಿರುವ ಸುಗಂಧರಾಜ ಹೂವಿನ ಬೆಳೆ
ಬಸವಾಪಟ್ಟಣ ಸಮೀಪದ ಹೊಸನಗರದ ರೈತ ಸಿದ್ಧಪ್ಪ ಬೆಳೆದಿರುವ ಸುಗಂಧರಾಜ ಹೂವಿನ ಬೆಳೆ   

ಬಸವಾಪಟ್ಟಣ: ಸಮೀಪದ ಹೊಸನಗರದ ರೈತ ಸಿದ್ಧಪ್ಪ 5 ವರ್ಷಗಳಿಂದ ಸುಗಂಧರಾಜ ಹೂಗಳನ್ನು ಬೆಳೆದು ಯಶಸ್ಸು ಸಾಧಿಸಿದ್ದಾರೆ.

ಸುಗಂಧರಾಜ ವರ್ಷದ ಎಲ್ಲ ಕಾಲದಲ್ಲಿಯೂ ಬೆಳೆಯುವ ಹೂ. ಅದರಂತೆ ಪ್ರತಿ ದಿನವೂ ಈ ಹೂವಿಗೆ ಅಷ್ಟೇ ಬೇಡಿಕೆ ಇದೆ. ಈ ಹೂವನ್ನು ಮಹಿಳೆಯರು ಮುಡಿಯುವುದಿಲ್ಲ. ದೇವರಿಗೆ ಹಾಕಲು ಹಾಗೂ ಅಲಂಕಾರಕ್ಕಾಗಿ ಮಾಲೆಗಳನ್ನು ಕಟ್ಟುವುದಕ್ಕೆ ಮಾತ್ರ ಬಳಸಲಾಗುತ್ತದೆ. ಪ್ರತಿ ದಿನ ಒಂದಲ್ಲ ಒಂದು ಹಬ್ಬ, ಸಮಾರಂಭಗಳು ನಡೆಯುತ್ತಲೇ ಇರುವುದರಿಂದ ಸುಗಂಧರಾಜದ ಮಾಲೆಗಳಿಗೆ ಬೇಡಿಕೆ ಹೆಚ್ಚು. ಇಂತಹ ಹೂ ಬೆಳೆದು ಯಶಸ್ಸು ಹಾಗೂ ಹಣ ಸಂಪಾದಿಸಿ ತೃಪ್ತಿ ಹೊಂದಿದ್ದಾರೆ ರೈತ ಸಿದ್ಧಪ್ಪ.

‘ಬಾಳೆಯಂತೆಸುಗಂಧರಾಜವೂ ಸಹ ಬೀಜ ರಹಿತ ಬೆಳೆಯಾಗಿದೆ. ಇದರ ಗಡ್ಡೆಯನ್ನು ನೆಟ್ಟು ಗಿಡ ಬೆಳೆಸಬೇಕಾಗುತ್ತದೆ. ಕೆಂಪು ಮತ್ತು ಕಪ್ಪು ಮಣ್ಣಿನಲ್ಲಿ ಉತ್ತಮವಾಗಿ ಬೆಳೆಯುವ ಸುಗಂಧರಾಜದ ಫಸಲಿಗೆ ನಿರಂತರ ನಿಗಾ ವಹಿಸುವುದು ಮುಖ್ಯ. ಒಂದು ಗಿಡ 18 ತಿಂಗಳ ಕಾಲ ನಿರಂತರವಾಗಿ ಹೂಗಳನ್ನು ನೀಡುತ್ತದೆ ನಂತರ ಅದನ್ನು ತೆಗೆದು ಬೇರೆ ಗಡ್ಡೆ ನೆಡಬೇಕು. ಶೇ 60ರಷ್ಟು ಕೊಟ್ಟಿಗೆ ಗೊಬ್ಬರ ಶೇ 40ರಷ್ಟು ರಾಸಾಯನಿಕ ಗೊಬ್ಬರ ಬಳಸಿ ಅರ್ಧ ಎಕರೆಯಲ್ಲಿ ಹೂಗಳನ್ನು ಬೆಳೆಯುತ್ತಿದ್ದೇನೆ. ದಿನಕ್ಕೆ ಸರಾಸರಿ 25 ರಿಂದ 30 ಕೆ.ಜಿ. ಹೂ ಬರುತ್ತಿದೆ. ಹಬ್ಬ ಹಾಗೂಮದುವೆ ಸೀಜನ್‌ಗಳಲ್ಲಿ ಬೇಡಿಕೆಯೂ ಹೆಚ್ಚು, ಬೆಲೆಯೂ ಹೆಚ್ಚು. ಸೀಜನ್‌ ಮುಗಿದ ಮೇಲೆ
ಬೆಲೆ ಸಹಜವಾಗಿ ಇಳಿಯುತ್ತದೆ. ಆದ್ದರಿಂದಪ್ರತಿ ದಿನ ನಾನು ಹೂ ಮಾರುವಅಂಗಡಿಗಳಿಗೆ ನಿಗದಿತ ದರಕ್ಕೆ ಒಪ್ಪಂದ ಮಾಡಿಕೊಂಡು ಮಾರಾಟ ಮಾಡುತ್ತಿದ್ದೇನೆ. ಪ್ರತಿದಿನ ಮುಂಜಾನೆ ಹೂ ಬಿಡಿಸಿ, ತಕ್ಷಣವೇ ಅಂಗಡಿಗಳಿಗೆ ಸಾಗಿಸಬೇಕು. ತಡವಾದರೆ
ಹೂ ಮಾರಾಟವಾಗುವುದಿಲ್ಲ. ಈ ಹೂಬೆಳೆಯಲ್ಲಿ ಶ್ರಮವೂ ಇದೆ. ಲಾಭವೂ ಇದೆ. ರೈತರಲ್ಲಿ ಬೆಳೆಯುವ ಆಸಕ್ತಿ ಬಹು ಮುಖ್ಯ’ ಎನ್ನುತ್ತಾರೆ ಸಿದ್ಧಪ್ಪ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.