ದಾವಣಗೆರೆ: ನ್ಯಾ.ಸದಾಶಿವ ಆಯೋಗದ ಮೂಲಕ ಬಂಜಾರ ಸಮಾಜವನ್ನು ಮೀಸಲಾತಿಯಿಂದ ಹೊರಗಿಡುವ ಷಡ್ಯಂತ್ರ ಮಾಡಲಾಗುತ್ತಿದೆ. ಆಯೋಗದ ವರದಿಯನ್ನು ರಾಜ್ಯ ಸರ್ಕಾರ ತಿರಸ್ಕರಿಸಬೇಕು. ಕೇಂದ್ರಕ್ಕೆ ಯಾವ ಕಾರಣಕ್ಕು ಶಿಫಾರಸು ಮಾಡಬಾರದು ಎಂದು ಚಿತ್ರದುರ್ಗ ಬಂಜಾರ ಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಆಗ್ರಹಿಸಿದರು.
ನಗರದ ರೋಟರಿ ಬಾಲಭವನದಲ್ಲಿ ಸೋಮವಾರ ನಡೆದ ಕರ್ನಾಟಕ ಬಂಜಾರ ರಕ್ಷಣಾ ವೇದಿಕೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಂಜಾರ ಸಮುದಾಯದ ಜತೆಗೆ ಭೋವಿ, ಕೊರಮ, ಕೊರಚ ಸಮುದಾಯಗಳನ್ನು ಕೂಡ ಪರಿಶಿಷ್ಠ ಜಾತಿಯಿಂದ ಹೊರಗಿಡುವ ಹುನ್ನಾರ ನಡೆಸಲಾಗಿದೆ. ಈ ಸಮುದಾಯಗಳ ಅನ್ನ ಕಸಿದುಕೊಳ್ಳಲು ಪ್ರಯತ್ನಿಸುವವರಿಗೆ ಭವಿಷ್ಯವಿಲ್ಲ ಎಂದು ತಿಳಿಸಿದರು.
ಸರ್ಕಾರ ಈ ವರದಿಯನ್ನು ತಿರಸ್ಕರಿದೇ ಇದ್ದರೆ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಬಂಜಾರ ಸಮಾಜದ ಸ್ವಾಮೀಜಿಗಳಾದ ಕೃಷ್ಣಾಪುರದ ಕುಮಾರ ಮಹಾರಾಜ್, ಕೊಟ್ಟೂರಿನ ಶಿವಪ್ರಕಾಶ್ ಮಹಾರಾಜ್, ಹುಬ್ಬಳ್ಳಿಯ ತಿಪ್ಪೇಶ್ವರ ಮಹಾರಾಜ್, ನಂದನಹಳ್ಳಿಯ ಶಿವಸಾದು ಬಾವಾಜಿ ಮಹಾರಾಜ್ ಆಶೀರ್ವಚನ ನೀಡಿದರು. ವೆಂಕಟೇಶ್ ನಾಯ್ಕ್, ಜೆ.ಡಿ.ನಾಯ್ಕ್ ಸಹಿತ ರಾಜ್ಯ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.