ದಾವಣಗೆರೆ: ಜಿಲ್ಲಾ ಚಿಗಟೇರಿ ಆಸ್ಪತ್ರೆಗೆ ಗುರುವಾರ ಆಮ್ಲಜನಕ ಪೂರೈಕೆ ಮಾಡುವ ಟ್ಯಾಂಕರ್ ಬರುವಾಗ ತಡವಾಗಿದೆ. ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಶಿವಮೊಗ್ಗ, ಚಿತ್ರದುರ್ಗ ಸಹಿತ ವಿವಿಧ ಕಡೆಗಳಿಂದ ಆಕ್ಸಿಜನ್ ತರಿಸಿಕೊಂಡಿದ್ದರು. ಅಷ್ಟು ಹೊತ್ತಿಗೆ ಟ್ಯಾಂಕರ್ ಬಂದಿದ್ದರಿಂದ ಯಾವುದೇ ತೊಂದರೆ ಉಂಟಾಗಿಲ್ಲ.
ತೋರಣಗಟ್ಟದ ಜಿಂದಾಲ್ ಆಕ್ಸಿಜನ್ ಪ್ಲಾಂಟ್ನಿಂದ ಬೆಳಿಗ್ಗೆ 8 ಗಂಟೆಗೆ ಆಮ್ಲಜನಕ ಹೊತ್ತ ವಾಹನ ಬರಬೇಕಿತ್ತು. ಆದರೆ ನಾಲ್ಕು ಗಂಟೆ ತಡವಾಗುತ್ತದೆ ಎಂಬ ಮಾಹಿತಿ ಬಂದಿತ್ತು. ಕೂಡಲೇ ಶಿವಮೊಗ್ಗ ಜಿಲ್ಲಾಧಿಕಾರಿ ಜತೆ ಮಾತನಾಡಿ 40 ಜಂಬೋ ಸಿಲಿಂಡರ್. ರೇಣುಕಾ ಇಂಡಸ್ಟ್ರಿಯಿಂದ 100, ಸದರ್ನ್ ಆಕ್ಸಿಜನ್ ಪ್ಲಾಂಟ್ನಿಂದ 100 ಜಂಬೋ ಸಿಲಿಂಡರ್ ತರಿಸಲಾಗಿತ್ತು. ಚಿತ್ರದುರ್ಗ ಜಿಲ್ಲಾಧಿಕಾರಿಗೂ ಆಮ್ಲಜನಕ ಪೂರೈಸಲು ಕೋರಲಾಗಿತ್ತು. ಅವರು ಹೊಳಲ್ಕೆರೆಯಿಂದ 4, ಚಿತ್ರದುರ್ಗದಿಂದ 6 ಒಟ್ಟು 10 ಸಿಲಿಂಡರ್ ಕಳುಹಿಸಿದ್ದರು. ಜತೆಗೆ ಜಿಂದಾಲ್ನಿಂದ ಟ್ಯಾಂಕರ್ ಅನ್ನು ಆದಷ್ಟು ಬೇಗ ಕಳುಹಿಸಲು ಕೋರಲಾಗಿತ್ತು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಬೆಳಿಗ್ಗೆ 10.45ಕ್ಕೆ ಟ್ಯಾಂಕರ್ ತಲುಪಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಇರುವ 6000 ಲೀಟರ್ ಲಿಕ್ವಿಡ್ ಮೆಡಿಕಲ್ ಆಕ್ಷಿಜನ್ ಸಾಮರ್ಥ್ಯದ ಪ್ಲಾಂಟ್ಗೆ ತುಂಬಿಸಲಾಗಿದೆ. ಯಾವುದೇ ಸಮಸ್ಯೆ ಉಂಟಾಗಿಲ್ಲ. ಚಿತ್ರದುರ್ಗದ ಸಿಲಿಂಡರ್ಗಳನ್ನು ಮತ್ತೆ ಅಲ್ಲಿಗೆ ಕಳುಹಿಸಲಾಗಿದೆ. ಶಿವಮೊಗ್ಗ, ಚಿತ್ರದುರ್ಗದ ಜಿಲ್ಲಾಧಿಕಾರಿಗಳು ಸಹಿತ ಎಲ್ಲರೂ ತಕ್ಷಣ ಸ್ಪಂದಿಸಿದ್ದಾರೆ. ಹಾಗಾಘಿ ಯಾವುದೇ ಗೊಂದಲ ಅಥವಾ ಅಪಾಯ ಉಂಟಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.