ದಾವಣಗೆರೆ: ರಾಜ್ಯದಲ್ಲಿ ಮೆಕ್ಕೆಜೋಳ ಬೆಳೆದ ರೈತರಿಗೆ ಮಹಾರಾಷ್ಟ್ರ ಮಾದರಿಯಲ್ಲಿ ಪ್ರೋತ್ಸಾಹಧನ ನೀಡಬೇಕು ಎಂದು ಆಗ್ರಹಿಸಿಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ಇಲ್ಲಿನ ಸಂಸದರ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಸಂಘದ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ್, ‘ಒಂದುಕ್ವಿಂಟಲ್ ಮೆಕ್ಕೆಜೋಳಕ್ಕೆ ಸರ್ಕಾರ ₹ 1,850 ನಿಗದಿ ಮಾಡಿದೆ. ಆದರೆ ಮಾರುಕಟ್ಟೆಯಲ್ಲಿ ₹ 1,100 ರಿಂದ ₹ 1,250ರವರೆಗೆ ಮಾರಾಟವಾಗುತ್ತಿದೆ. ಇದರಿಂದಾಗಿ ರೈತರಿಗೆ ಪ್ರತಿ ಕ್ವಿಂಟಲ್ಗೆ ₹ 700 ರಿಂದ ₹ 750 ನಷ್ಟವಾಗಿದೆ. ಮಹಾರಾಷ್ಟ್ರ ಸರ್ಕಾರ ಮೆಕ್ಕೆಜೋಳ ಬೆಳೆಗಾರರಿಗೆ ₹ 700 ಪ್ರೋತ್ಸಾಹಧನ ನೀಡುತ್ತಿದ್ದು, ಇದೇ ಮಾದರಿಯಲ್ಲೇ ರಾಜ್ಯದ ರೈತರಿಗೂ ಪ್ರೋತ್ಸಾಹಧನ ನೀಡಬೇಕು. ಮೆಕ್ಕೆಜೋಳ ಬೆಳೆಗಾರರ ಸಾಲ ಮನ್ನಾ ಮಾಡಬೇಕು’ ಎಂದು ಆಗ್ರಹಿಸಿದರು.
ಪೆಟ್ರೋಲ್ ಬೆಲೆ ಏರಿಕೆಗೆ ಖಂಡನೆ: ‘ರಾಜ್ಯದಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ಗಳ ಬೆಲೆಗಳನ್ನು ಪದೇ ಪದೇ ಹೆಚ್ಚಿಸುವುದಕ್ಕಿಂತ ಒಂದೇ ಬಾರಿ ₹ 100ಕ್ಕೆ ಹೆಚ್ಚಿಸಿದರೆ ಒಳಿತು. ರೈತರು ಮತ್ತು ಗ್ರಾಹಕರು ಚಿಲ್ಲರೆ ವಾಪಸ್ ತೆಗೆದುಕೊಳ್ಳಲು ನಾಚಿಕೆಯಾಗುತ್ತಿದೆ’ ಎಂದು ಟೀಕಿಸಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕಬ್ಬಳ ಪ್ರಸಾದ್, ಹಿರಿಯ ಉಪಾಧ್ಯಕ್ಷಆವರಗೆರೆ ಇಟಗಿ ಬಸವರಾಜಪ್ಪ, ಉಪಾಧ್ಯಕ್ಷರಾದ ಲಿಂಗರಾಜ ಪಾಮೇನಹಳ್ಳಿ, ಆರ್.ಜಿ. ಬಸವರಾಜ ರಾಂಪುರ, ಗೆದ್ಲಹಟ್ಟಿ ಹನುಮಂತಪ್ಪ, ತಾಲ್ಲೂಕು ಘಟಕದ ಅಧ್ಯಕ್ಷ ಮಾಯಕೊಂಡ ಗೌಡ್ರ ಅಶೋಕ, ಉಪಾಧ್ಯಕ್ಷ ಆಲೂರು ಪರಮೇಶ್ವರಪ್ಪ, ಸಲಹಾ ಸಮಿತಿ ಸದಸ್ಯ ಆಲೂರು ಮಂಜಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.