ADVERTISEMENT

ರೈತರ ಪಂಪ್‌ಸೆಟ್‌ಗಳಿಗೆ 6 ಗಂಟೆ ವಿದ್ಯುತ್ ನೀಡಿ: ಮಾಡಾಳ್

ವಿದ್ಯುತ್ ಸಮಸ್ಯೆ ಕುರಿತು ಚನ್ನಗಿರಿ ಪ್ರವಾಸಿ ಮಂದಿರದಲ್ಲಿ ಸಭೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2022, 4:43 IST
Last Updated 12 ಜನವರಿ 2022, 4:43 IST
ಚನ್ನಗಿರಿಯ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ಬೆಸ್ಕಾಂ ಅಧಿಕಾರಿಗಳ ಸಭೆಯಲ್ಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮಾತನಾಡಿದರು.
ಚನ್ನಗಿರಿಯ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ಬೆಸ್ಕಾಂ ಅಧಿಕಾರಿಗಳ ಸಭೆಯಲ್ಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮಾತನಾಡಿದರು.   

ಚನ್ನಗಿರಿ: ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ಕೆರೆಕಟ್ಟೆಗಳು ತುಂಬಿವೆ. ಹಾಗಾಗಿ ಬೇಸಿಗೆಯಲ್ಲಿ ವಿದ್ಯುತ್ ಸಮಸ್ಯೆಯಾಗುವುದಿಲ್ಲ ಎಂಬ ನಂಬಿಕೆ ಇದೆ. ಆದರೂ ರೈತರ ಪಂಪ್‌ಸೆಟ್‌ಗಳಿಗೆ ಗುಣಮಟ್ಟದ 6 ಗಂಟೆ ವಿದ್ಯುತ್ ಸರಬರಾಜು ಮಾಡುವಂತೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಬೆಸ್ಕಾಂ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈಗಾಗಲೇ ಬೆಂಕಿಕೆರೆ ಬಳಿ ₹ 125 ಕೋಟಿ ವೆಚ್ಚದಲ್ಲಿ 200 ಕೆವಿ ವಿದ್ಯುತ್ ಕೆಂದ್ರವನ್ನು ಸ್ಥಾಪಿಸಲಾಗಿದೆ. ಕೆಲ ಗ್ರಾಮಗಳಲ್ಲಿ ಹೆಚ್ಚಿನ ಪರಿಹಾರಕ್ಕೆ ಒತ್ತಾಯಿಸಿ ಕೇಂದ್ರಕ್ಕೆ ಗೋಪುರ ಅಳವಡಿಕೆ ಕಾಮಗಾರಿಗೆ ತಡೆ ಒಡ್ಡಿದ್ದರು. ಗ್ರಾಮಗಳ ಜನರ ಮನವೊಲಿಸಿ ಗೋಪುರಗಳ ಅಳವಡಿಕೆ ಕಾರ್ಯವನ್ನು ಮಾಡಲಾಗಿದೆ. ಬಾಕಿ ಉಳಿದಿರುವ ಕಾಮಗಾರಿಯನ್ನು ಬೇಗ ಮುಕ್ತಾಯಗೊಳಿಸಬೇಕು. ಇನ್ನೆರಡು ತಿಂಗಳಲ್ಲಿ ಕೆಂದ್ರವನ್ನು ಮುಖ್ಯಮಂತ್ರಿ ಅವರು ಲೋಕಾರ್ಪಣೆಗೊಳಿಸುವರು. ಕೇಂದ್ರದ ಪ್ರಾರಂಭದಿಂದ ವಿದ್ಯುತ್ ಸಮಸ್ಯೆ ನಿವಾರಣೆಯಾಗಲಿದೆ. ರೈತರಿಗೆ ಗುಣಮಟ್ಟದ ವಿದ್ಯುತ್ ನೀಡಲು ಸಾಧ್ಯವಾಗಲಿದೆ ಎಂದರು.

ADVERTISEMENT

ಪ್ರಸ್ತುತ ಹಗಲು 2 ಗಂಟೆ ಹಾಗೂ ರಾತ್ರಿ 3 ಗಂಟೆ ಸೇರಿ ಒಟ್ಟು 5 ಗಂಟೆ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಇದನ್ನು ಬದಲಾಯಿಸಿ ಹಗಲು 3 ಹಾಗೂ ರಾತ್ರಿ 3 ಗಂಟೆಗಳ ಕಾಲ ವಿದ್ಯುತ್‌ ಸರಬರಾಜು ಮಾಡಬೇಕು. ರೈತರಿಂದ ದೂರುಗಳು ಬಾರದ ರೀತಿಯಲ್ಲಿ ಅವರ ಕಷ್ಟಗಳಿಗೆ ನೆರವಾಗಬೇಕು. ರೈತರಿಗೆ ಅನ್ಯಾಯವಾದರೆ ಸಹಿಸುವುದಿಲ್ಲ ಎಂದು ಅವರು ಎಚ್ಚರಿಸಿದರು.

ದಾವಣಗೆರೆ ಕೆಪಿಟಿಸಿಎಲ್ ಮುಖ್ಯ ಎಂಜಿನಿಯರ್ ಸುಭಾಶ್ ಚಂದ್ರ, ಬೆಸ್ಕಾಂ ಎಸ್‌ಸಿ ಜಗದೀಶ್, ಎಸಿಎಫ್ ಸುಬ್ರಹ್ಮಣ್ಯ, ಇಇ ಎಸ್.ಎಸ್. ಪಾಟೀಲ್, ಕುಮಾರಸ್ವಾಮಿ, ಬೆಸ್ಕಾಂ ಇಲಾಖೆ ಎಇಇ ಲೋಹಿತ್, ನಾಗರಾಜ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.