ದಾವಣಗೆರೆ: ನೆರಳು ಬೀಡಿ ಕಾರ್ಮಿಕರ ಯೂನಿಯನ್ ಕಚೇರಿಯಲ್ಲಿ ನಾವು ಭಾರತೀಯರು ಸಂಘಟನೆಯಿಂದ 74ನೇ ಸ್ವಾತಂತ್ರ ದಿನಾಚರಣೆಯನ್ನು ಆಚರಿಸಿ, 15 ಅಂಶಗಳ ಹಕ್ಕೋತ್ತಾಯದ ಮನವಿಗೆ ಸಹಿ ಸಂಗ್ರಹಕ್ಕೆ ಚಾಲನೆ ನೀಡಲಾಯಿತು.
ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲ ದಾದಾಪೀರ್ ನವಿಲೇಹಾಳ್ ಚಾಲನೆ ನೀಡಿದರು.
ಸಕಲರಿಗೂ ಸಮಾನ ವೈದ್ಯಕೀಯ ನೆರವನ್ನು ಒದಗಿಸುವ ಹೊಣೆಯನ್ನು ಸರ್ಕಾರ ವಹಿಸಿಕೊಳ್ಳಬೇಕು. ಎಲ್ಲರಿಗೂ ಉದ್ಯೋಗ ಯೋಜನೆ ರೂಪಿಸಬೇಕು. ಕಾರ್ಮಿಕರಿಗೆ ಉದ್ಯೋಗ ಭದ್ರತೆ ಒದಗಿಸಬೇಕು. ಕೃಷಿ ಕ್ಷೇತ್ರದ ಸಂಪೂರ್ಣ ಸಾಲಮನ್ನಾ ಮಾಡಬೇಕು. ಬೆಳೆಗೆ ಖಾತರಿ ಬೆಲೆ ನಿಗದಿಮಾಡಬೇಕು, ಸರ್ಕಾರೀ ಮತ್ತು ಖಾಸಗೀ ಶಾಲೆ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ಬಡ ವಿದ್ಯಾರ್ಥಿಗಳ ಶುಲ್ಕವನ್ನು ಸರ್ಕಾರವೇ ಭರಿಸಬೇಕು ಮುಂತಾದ 15 ಬೇಡಿಕೆಗಳಿಗೆ ರಾಜ್ಯದಾದ್ಯಂತ ಸಹಿ ಸಂಗ್ರಹಿಸಿ ರಾಷ್ಟ್ರಪತಿಗೆ ಕಳುಹಿಸಲಾಗುವುದು ಎಂದು ಸಂಘಟಕರು ತಿಳಿಸಿದರು.
ಕೊರೊನಾ ಬಂದಾಗ ಯಾವುದೇ ಸಿದ್ಧತೆಗಳಿಲ್ಲದೇ ಲಾಕ್ಡೌನ್ ಜಾರಿ ಮಾಡಿದ್ದರಿಂದ ಜನಸಾಮಾನ್ಯರಿಗೆ ತೊಂದರೆಯಾಯಿತು. ಸರ್ಕಾರ ಅಸಂವಿಧಾನಿಕ ಅಜೆಂಡಾಗಳನ್ನು ಜಾರಿಗೆ ತರುವ ಮೂಲಕ ಈ ತೊಂದರೆ ಇನ್ನಷ್ಟು ಹೆಚ್ಚಾಯಿತು. ಆರ್ಥಿಕತೆ ಸಂಪೂರ್ಣ ನೆಲಕಚ್ಚಿದೆ. ಸದನದಲ್ಲಿ ಯಾವುದೇ ಚರ್ಚೆಗಳನ್ನು ಮಾಡದೇ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ಕಾರ್ಮಿಕ ಕಾನೂನುಗಳಿಗೆ ಸುಗ್ರಿವಾಜ್ಞೆ ಮೂಲಕ ತಿದ್ದುಪಡಿ ಮಾಡಿ ಜಾರಿಗೆ ತರಲು ಹೊರಟಿದೆ. ಈ ಮೂಲಕ ಜನರ ಹಕ್ಕುಗಳನ್ನು ಮೊಟಕುಗೊಳಿಸುತ್ತಿದೆ ಎಂದರು.
ಸಾಹಿತಿ ಪ್ರೊ. ಎ.ಬಿ. ರಾಮಚಂದ್ರಪ್ಪ, ಜಬೀನಾಖಾನಂ, ಇಕ್ಬಾಲ್ ಸಾಬ್, ಟಿ. ಅಸ್ಗರ್, ಅನೀಸ್ ಪಾಷಾ, ಅನ್ವರ್ ದಾಗ್, ಅನ್ವರ್ ಖಾನ್, ಅಬ್ದುಲ್ ಸಮದ್, ಅಸದ್ ಉಲ್ಲಾ, ಖಲೀಲ್ ಖಾನ್, ಶಿರಿನ್, ಹಸೀನ, ನೂರ್ ಫಾತಿಮಾ, ನಾಜಿಮ, ಬಿಬಿಜಾನ್, ಶಾಹಿನ, ಫಾತಿಮಾ, ನಾಹೇರ, ಸತೀಶ್, ಪವಿತ್ರ, ಕರಿಬಸಪ್ಪ, ಇಸ್ಮಾಯಿಲ್ ಅಶ್ರಫಿ ಅವರೂ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.