
ನ್ಯಾಮತಿ: ‘ಗ್ರಾಮೀಣ ಭಾಗದ ಕಲಾವಿದರು ಸರ್ಕಾರದಿಂದ ಸಿಗುವ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ದಾವಣಗೆರೆ ಜಿಲ್ಲಾ ಹವ್ಯಾಸಿ ಗ್ರಾಮೀಣ ಕಲಾವಿದರ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಎಸ್.ರಾಜು ಹೇಳಿದರು.
ಪಟ್ಟಣದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಕಚೇರಿಯಲ್ಲಿ ಭಾನುವಾರ ತಾಲ್ಲೂಕಿನ ಗ್ರಾಮೀಣ ಭಾಗದ ಕಲಾವಿದರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ಮತ್ತು ಸಂಘದ ಸದಸ್ಯತ್ವ ಪಡೆಯುವ ಬಗ್ಗೆ ಮಾಹಿತಿ ನೀಡಿದರು.
ಭಜನೆ ತಂಡದ ಸದಸ್ಯರು, ಡೊಳ್ಳು ತಂಡದವರು, ಪುರುವಂತಿಕೆ, ಜಾನಪದ ಗಾಯಕರು, ಕೋಲಾಟ ಕಲಾವಿದರು ಸೇರಿದಂತೆ ವಿವಿಧ ಕಲಾವಿದರು ತಮ್ಮ ಸಂಘಗಳನ್ನು ನೋಂದಣಿ ಮಾಡಿಸಿಕೊಳ್ಳಬೇಕು. ಎರಡು ಮೂರು ವರ್ಷಗಳ ತಮ್ಮ ಕಾರ್ಯಕ್ರಮಗಳ ದಾಖಲೆಗಳನ್ನು ಸರ್ಕಾರಕ್ಕೆ ಸಲ್ಲಿಸಿದರೆ ಅನುದಾನ ಪಡೆಯಲು ಅನುಕೂಲವಾಗುತ್ತದೆ ಎಂದರು.
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಎಂ.ಹಾಲಾರಾಧ್ಯ, ತಾಲ್ಲೂಕಿನ ಕಲಾವಿದರಿಗೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ಸುರಹೊನ್ನೆ ವಿರೂಪಾಕ್ಷಚಾರ್ ಅವರನ್ನು ಪ್ರಭಾರವಾಗಿ ತಾಲ್ಲೂಕು ಸಂಚಾಲಕರನ್ನಾಗಿ ನೇಮಿಸಲಾಯಿತು.
ನಿಕಟಪೂರ್ವ ಅಧ್ಯಕ್ಷ ಗಡೆಕಟ್ಟೆರ ನಿಜಲಿಂಗಪ್ಪ, ಕೋಶಾಧ್ಯಕ್ಷ ಎಂ.ಎಸ್.ಜಗದೀಶ, ಕಲಾವಿದ ಸಿ.ಕೆ.ಬೋಜರಾಜ, ಆರುಂಡಿ ಮಂಜಪ್ಪ, ರೇವಣಸಿದ್ದಪ್ಪ, ಸಿದ್ದಪ್ಪ, ವೀಣಾ ಆಚಾರ್ ಮಾತನಾಡಿದರು.
ಕಲಾವಿದರಾದ ಹನುಮಂತಾಚಾರ್, ಮಾರ್ತಾಂಡಪ್ಪ, ನಿರ್ಥಡಿ ಬಸವರಾಜಪ್ಪ, ನಿವೃತ್ತ ಅಧಿಕಾರಿ ಜಯಪ್ಪ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.