ದಾವಣಗೆರೆ: ಕರ್ನಾಟಕ ಗೃಹ ಮಂಡಳಿಯಿಂದ ಹಂಚಿಕೆ ಮಾಡಿರುವ ನಿವೇಶನಗಳು ಹಾಗೂ ಮನೆಗಳಿಗಾಗಿ ಅರ್ಜಿಯನ್ನು ಪಡೆಯಲು ಸಾವಿರಾರು ಆಕಾಂಕ್ಷಿಗಳು ಇಲ್ಲಿನ ಪಿ.ಬಿ. ರಸ್ತೆಯ ಆ್ಯಕ್ಸಿಸ್ ಬ್ಯಾಂಕ್ ಶಾಖೆಯ ಎದುರು ಜಮಾಯಿಸಿದ್ದರು.
ಹೆಚ್ಚಿನ ಆಕಾಂಕ್ಷಿಗಳು ಜಮಾಯಿಸಿದ್ದರಿಂದ ಅರ್ಜಿಗಳನ್ನು ಪಡೆಯಲು ನೂಕು ನುಗ್ಗಲು ಉಂಟಾಯಿತು. ಪೊಲೀಸರು ಅವರನ್ನು ನಿಯಂತ್ರಿಸಲು ಹರ ಸಾಹಸಪಟ್ಟರು. ಮುಂಜಾನೆ 6 ಗಂಟೆಗೆ ಬಂದಿದ್ದ ಆಕಾಂಕ್ಷಿಗಳು ಅರ್ಜಿ ಪಡೆಯಲು ಸರತಿ ಸಾಲಿನಲ್ಲಿ ನಿಂತಿದ್ದರು. ಬೆಳಿಗ್ಗೆ 9.30ಕ್ಕೆ ಅರ್ಜಿಗಳನ್ನು ನೀಡಬೇಕಿದ್ದ ಬ್ಯಾಂಕ್ ಸಿಬ್ಬಂದಿ 10.30ಕ್ಕೆ ಅರ್ಜಿ ನೀಡಲು ಆರಂಭಿಸಿದರು. ಇದರಿಂದ ಆಕಾಂಕ್ಷಿಗಳು ಇನ್ನಷ್ಟು ಕುಪಿತಗೊಂಡರು.
ಹರಿಹರದ ಪ್ರಶಾಂತ್ ನಗರದ ಬಳಿ 50 ಎಕರೆ 23 ಗುಂಟೆ ಜಮೀನಿನಲ್ಲಿ ಮನೆ ಹಾಗೂ ನಿವೇಶನಗಳನ್ನು ಅಭಿವೃದ್ಧಿಪಡಿಸುತ್ತಿದ್ದು, ಆ್ಯಕ್ಸಿಸ್ ಬ್ಯಾಂಕ್ನ ದಾವಣಗೆರೆ ಶಾಖೆಯಲ್ಲೇ ಅರ್ಜಿಗಳನ್ನು ಪಡೆಯುವಂತೆ ಕರ್ನಾಟಕ ಗೃಹ ಮಂಡಳಿಯಿಂದ ಪತ್ರಿಕೆಗಳಲ್ಲಿ ಜಾಹೀರಾತು ನೀಡಲಾಗಿತ್ತು. ಇದನ್ನು ನೋಡಿದ ಹರಿಹರ ತಾಲ್ಲೂಕಿನ ಆಕಾಂಕ್ಷಿಗಳು ಬೆಳಿಗ್ಗೆಯೇ ದಾವಣಗೆರೆಯ ಬ್ಯಾಂಕ್ ಶಾಖೆಯಲ್ಲಿ ಕಾದು ಕುಳಿತಿದ್ದರು.
‘ಒಂದು ಶಾಖೆಯಲ್ಲಿ ಅರ್ಜಿಗಳನ್ನು ವಿತರಿಸುತ್ತಿದ್ದುದರಿಂದ ನೂಕು ನುಗ್ಗಲು ಉಂಟಾಗಿದೆ. ಹೆಚ್ಚುವರಿ ಶಾಖೆಗಳನ್ನು ತೆರೆದು ವಿತರಿಸಲು ಮನವಿ ಮಾಡುತ್ತೇನೆ. ಡಿ.23ರವೆರೆಗೂ ಅರ್ಜಿಗಳನ್ನು ವಿತರಿಸಲಾಗುವುದು ಎಂದು’ ಕರ್ನಾಟಕ ಗೃಹ ಮಂಡಳಿಯ ಸೂಪರಿಂಟೆಂಡೆಂಟ್ ಸಿ.ರಾಮದಾಸ್ ಮಾಧ್ಯಮದವರಿಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.