ದಾವಣಗೆರೆ: ‘ಸೈರಾ ನರಸಿಂಹರೆಡ್ಡಿ’ ಚಿತ್ರದ ಕನ್ನಡ ಅವತರಣಿಕೆ ಬಿಡುಗಡೆಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದಿಂದ ತ್ರಿಶೂಲ್ ಚಿತ್ರಮಂದಿರದ ಬಳಿ ಮಂಗಳವಾರ ಪ್ರತಿಭಟನೆ ನಡೆಯಿತು.
ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ರಾಮೇಗೌಡ ಮಾತನಾಡಿ, ಖ್ಯಾತ ನಟ ಚಿರಂಜೀವಿ ಅವರು ಅಭಿನಯಿಸಿರುವ ‘ಸೈರಾ’ ನಾಲ್ಕು ಭಾಷೆಗಳಲ್ಲಿ ಚಿತ್ರ ಪ್ರದರ್ಶನವಾಗುತ್ತಿದ್ದು, ಕನ್ನಡಕ್ಕೂ ಡಬ್ ಮಾಡಲಾಗಿದೆ. ರಾಜ್ಯದಲ್ಲಿ ಕನ್ನಡ ಭಾಷೆಯಲ್ಲಿ ಬಿಡುಗಡೆಯಾಗಬೇಕು. ಕರ್ನಾಟಕದಲ್ಲಿ ವಾಸಿಸುವ ಪರಭಾಷಿಕರು ಕನ್ನಡದಲ್ಲಿ ಸಿನಿಮಾ ನೋಡಿದರೆ ಅವರೂ ಕನ್ನಡ ಕಲಿಯುವುದಕ್ಕೆ ಅನುಕೂಲವಾಗುತ್ತದೆ. ಬುಧವಾರದಿಂದ ತ್ರಿಶೂಲ್ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಮುಂದೆ ಧರಣಿ ನಡೆಸಲಾಗುವುದು’ ಎಂದು ಎಚ್ಚರಿಸಿದ್ದಾರೆ.
‘ಪರಭಾಷೆಯಿಂದ ಕನ್ನಡಕ್ಕೆ ಡಬ್ ಆಗಿ ಈಗಾಗಲೇ ಹಲವು ಚಿತ್ರಗಳು ಬಿಡುಗಡೆಯಾಗಿವೆ. ಈ ವರ್ಷದ ದೊಡ್ಡ ಬಜೆಟ್ನ ಚಿತ್ರಗಳಲ್ಲಿ ಒಂದಾದ ‘ಸೈರಾ ನರಸಿಂಹರೆಡ್ಡಿ’ ಕೂಡ ಕನ್ನಡಕ್ಕೆ ಡಬ್ ಆಗಿದ್ದು, ಬಿಡುಗಡೆಗೆ ಕ್ಷಣಗಣನೆ ನಡೆಯುತ್ತಿದೆ. ಕನ್ನಡದ ಅವತರಣಿಕೆ ಇದ್ದರೂ ರಾಜ್ಯದಲ್ಲಿ ತೆಲುಗು ಅವತರಣಿಕೆಯನ್ನು ಹೆಚ್ಚಿನ ಥಿಯೇಟರ್ ಮತ್ತು ಮಲ್ಟಿಫ್ಲೆಕ್ಸ್ಗಳಲ್ಲಿ ಪ್ರದರ್ಶಿಸಲಾಗುತ್ತಿದೆ. ಕನ್ನಡ ಅವತರಣಿಕೆಗೆ ನೋಡುಗರಿಂದ ಬೇಡಿಕೆಗಳಿದ್ದರೂ ಅದನ್ನು ತಿರಸ್ಕರಿಸಿ, ತೆಲುಗು ಹೇರಿಕೆಯು ನಾಡದ್ರೋಹಿ. ಈ ನಡೆಯನ್ನು ರಾಜ್ಯದ ಎಲ್ಲಾ ಕನ್ನಡಿಗರು ವಿರೋಧಿಸುತ್ತೇವೆ’ ಎಂದರು.
ವೇದಿಕೆಯ ಪದಾಧಿಕಾರಿಗಳಾದ ಕೆ.ಜಿ.ಬಸವರಾಜು, ಮುಜಾಹಿದ್, ಖಮರ್ ಅಲಿ, ಡಿ.ಮಲ್ಲಿಕಾರ್ಜುನ, ಜಿ. ಪ್ರಕಾಶ್, ಜಿ.ರಮೇಶ ಪ್ರತಿಭಟನೆಯಲ್ಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.