ADVERTISEMENT

ಕುರುಚಲು ಕಾಡಿನಂತಾದ ಸಂತೇಬೆನ್ನೂರು ಕಾಲೇಜು ಆಟದ ಮೈದಾನ

ಸಂಬಂಧಪಟ್ಟವರು ಗಮನಹರಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2021, 2:47 IST
Last Updated 6 ಆಗಸ್ಟ್ 2021, 2:47 IST
ಸಂತೇಬೆನ್ನೂರಿನ ಸರ್ಕಾರಿ ಪದವಿ ಕಾಲೇಜು ಆಟದ ಮೈದಾನದ ಅವ್ಯವಸ್ಥೆ.
ಸಂತೇಬೆನ್ನೂರಿನ ಸರ್ಕಾರಿ ಪದವಿ ಕಾಲೇಜು ಆಟದ ಮೈದಾನದ ಅವ್ಯವಸ್ಥೆ.   

ಸಂತೇಬೆನ್ನೂರು: ಇಲ್ಲಿನ ಸರ್ಕಾರಿ ಪದವಿ ಕಾಲೇಜು ಮೈದಾನದಲ್ಲಿ ದಟ್ಟ ಪೊದೆ, ಗಿಡ, ಗಂಟಿಗಳು ಬೆಳೆದಿವೆ. ಆಟದ ಅಂಗಳಗಳು ಮುಚ್ಚಿ ಪಾಳು ಭೂಮಿಯಂತಾಗಿವೆ. ಪದವಿ ತರಗತಿಗಳು ಆರಂಭವಾಗಿದ್ದು, ವಿದ್ಯಾರ್ಥಿಗಳು ಮೈದಾನದಲ್ಲಿ ಕಾಲಿಡದಂತಾಗಿದೆ.

ಸರ್ಕಾರಿ ಪದವಿ ಕಾಲೇಜು ಜಾಗ ಸುಮಾರು ಏಳು ಎಕರೆಯಿದೆ. ಕೊರೊನಾ ಕಾರಣ ಕಾಲೇಜಿಗೆ ಸತತ ರಜೆ ಘೋಷಿಸಿದ್ದರಿಂದ ಮೈದಾನಗಳು ಬಳಕೆಯಿಂದ ದೂರ ಉಳಿದು ಕ್ರಮೇಣ ಗಿಡಗಂಟಿಗಳು ಬೆಳೆದು ನಿಂತಿವೆ. ನಿರ್ವಹಣೆ ಇಲ್ಲದೆ ಇಡೀ ಮೈದಾನ ಅನುಪಯುಕ್ತಗೊಂಡಿದೆ. ಕ್ರೀಡಾಸಕ್ತ ವಿದ್ಯಾರ್ಥಿಗಳ ಸಾಧನೆಗೆ ಹಿನ್ನಡೆ ಆಗಿದೆ ಎನ್ನುತ್ತಾರೆ ವಿದ್ಯಾರ್ಥಿಗಳಾದ ಶಶಿ, ರಮೇಶ್.

ಸುಸಜ್ಜಿತ ಕೊಠಡಿಗಳು ನಿರ್ಮಾಣಗೊಂಡಿವೆ. ಸುತ್ತ ಕಾಂಪೌಂಡ್ ನಿರ್ಮಿಸಲಾಗಿದೆ. ಮೈದಾನದ ಮಧ್ಯ ಕಾಲುವೆಯಲ್ಲಿ ನೀರು ನಿಂತು ಕಲುಷಿತ ಗೊಂಡಿದೆ. ಅಲ್ಲಲ್ಲಿ ತ್ಯಾಜ್ಯಗಳ ರಾಶಿ ಬಿದ್ದಿದ್ದೆ. ಸದ್ಯದ ನೆಲ ಕ್ರೀಡಾ ಅಂಕಣಗಳಿಗೆ ಸದೃಢವಲ್ಲ. ಕೆಂಪು ಮಣ್ಣಿನ ಮೇಲ್ಪದರ ರಚಿಸಬೇಕು. ಕುರುಚಲು ಗಿಡಗಳನ್ನು ತೆಗೆಯಿಸಬೇಕು. ದೊಡ್ಡ ಪ್ರಮಾಣದ ಯೋಜನೆಯಿಂದ ಮಾತ್ರ ಮೈದಾನಕ್ಕೆ ಕಾಯಕಲ್ಪ ಸಾಧ್ಯ. ಅನುದಾನದ ಕೊರತೆಯಿಂದ ಅಭಿವೃದ್ಧಿ ಕೈಗೊಳ್ಳಲಾಗುತ್ತಿಲ್ಲ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಸಿಬ್ಬಂದಿ.

ADVERTISEMENT

‘ಈಗಾಗಲೇ ₹ 2 ಕೋಟಿ ವೆಚ್ಚದ ಹೊಸ ಕಟ್ಟಡ ಉದ್ಘಾಟನೆಗೆ ಸಿದ್ಧವಾಗಿದೆ. ಡಿಜಿಟಲ್ ತಂತ್ರಜ್ಞಾನದ ಪಾಠೋಪಕರಣಗಳನ್ನು ಅಳವಡಿಸಲಾಗಿದೆ. ವಿವಿಧ ಮೂಲಗಳಿಂದ ಮೈದಾನ ಸ್ವಚ್ಛತೆಗೆ ಅನುದಾನ ತರಲು ಪ್ರಯತ್ನ ನಡೆದಿದೆ. ತಾಂತ್ರಿಕ ಸಮಸ್ಯೆಗಳಿಂದ ತಡವಾಗುತ್ತಿದೆ. ಶೀಘ್ರ ಕ್ರೀಡಾ ಚಟುವಟಿಕೆಗೆ ಪೂರಕ ಪರಿಸರ ನಿರ್ಮಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದೇವೆ’ ಎನ್ನುತ್ತಾರೆ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಹುಚ್ಚಂಗಿ ಪ್ರಸಾದ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.