ಸಾಸ್ವೆಹಳ್ಳಿ: ಕಲುಷಿತ ನೀರು ಕುಡಿದು ಏಳು ಜನರಲ್ಲಿ ವಾಂತಿ-ಭೇದಿ, ಜ್ವರದ ಲಕ್ಷಣ ಕಾಣಿಸಿಕೊಂಡ ಹುಣಸಘಟ್ಟ ಗ್ರಾಮದಲ್ಲಿ ₹14 ಲಕ್ಷ ವೆಚ್ಚದಲ್ಲಿ ಎರಡು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಅನುದಾನ ಮಂಜೂರು ಮಾಡಲಾಗಿದೆ ಎಂದು ಶಾಸಕ ಡಿ.ಜಿ ಶಾಂತನಗೌಡ ಹೇಳಿದರು.
ಗ್ರಾಮದ ನೈರ್ಮಲ್ಯ ಕಾಪಾಡುವುದು ಗ್ರಾಮ ಪಂಚಾಯಿತಿಯ ಕೆಲಸವಾಗಿದ್ದು, ಸ್ಥಳೀಯ ಅಧಿಕಾರಿಗಳು ಜನರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಸ್ಥಳೀಯ ಸಮಸ್ಯೆಗಳನ್ನು ಗ್ರಾಮಾಡಳಿತ ಗಮನಿಸಿ ಪರಿಹರಿಸಬೇಕು ಎಂದು ಸಭೆಯಲ್ಲಿ ಅವರು ಸೂಚಿಸಿದರು.
ಹೊನ್ನಾಳಿ ಉಪವಿಭಾಗಾಧಿಕಾರಿ ವಿ.ಅಭಿಷೇಕ್, ತಹಶೀಲ್ದಾರ್ ಸುರೇಶ್ ನಾಯ್ಕ, ಗ್ರಾಮೀಣ ನೀರು ಸರಬರಾಜು ಇಲಾಖೆಯ ಎಇಇ ಸೋಮ್ಲಾನಾಯ್ಕ, ಕ್ಯಾಸಿನಕೆರೆ ಡಾ.ಜಿ.ಬಿ.ಚಂದ್ರಪ್ಪ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್, ಹೊನ್ನಾಳಿ ಪೊಲೀಸ್ ಠಾಣೆಯ ಪಿಐ ಸುನಿಲ್ ಕುಮಾರ್, ಗ್ರಾಮದ ಮುಖಂಡ ಎಚ್.ಎ ಗದ್ದಿಗೇಶ್ ಇದ್ದರು.
ಅಸ್ವಸ್ಥಗೊಂಡ ಏಳು ಜನರ ಪೈಕಿ ಮಹಿಳೆಯೊಬ್ಬರು ಮೃತಪಟ್ಟಿದ್ದು, ಆರು ಜನ ಗುಣಮುಖರಾಗಿದ್ದಾರೆ. ಶನಿವಾರ ಅಸ್ವಸ್ಥಗೊಂಡಿದ್ದ ಗ್ರಾಮದ ವ್ಯಕ್ತಿಯೊಬ್ಬರು ಕ್ಯಾಸಿನಕೆರೆ ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.