ADVERTISEMENT

ನ್ಯಾಮತಿ: ಸವಳಂಗ ಹೊಸಕೆರೆ ಕಾಲುವೆ ಕಾಮಗಾರಿ ಕಳಪೆ

ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಗ್ರಾಮಗಳ ರೈತರ ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಜುಲೈ 2021, 4:33 IST
Last Updated 12 ಜುಲೈ 2021, 4:33 IST
ನ್ಯಾಮತಿ ತಾಲ್ಲೂಕು ಸವಳಂಗ ಹೊಸಕೆರೆ ಕಾಲುವೆಯ ಇಕ್ಕೆಲಗಳಲ್ಲಿ ಮಣ್ಣಿನ ಮೇಲೆ ಸಿಮೆಂಟ್ ಕಾಂಕ್ರೀಟ್ ಹಾಕುತ್ತಿರುವುದು.
ನ್ಯಾಮತಿ ತಾಲ್ಲೂಕು ಸವಳಂಗ ಹೊಸಕೆರೆ ಕಾಲುವೆಯ ಇಕ್ಕೆಲಗಳಲ್ಲಿ ಮಣ್ಣಿನ ಮೇಲೆ ಸಿಮೆಂಟ್ ಕಾಂಕ್ರೀಟ್ ಹಾಕುತ್ತಿರುವುದು.   

ನ್ಯಾಮತಿ: ತಾಲ್ಲೂಕಿನ ಸವಳಂಗ ಹೊಸಕೆರೆಯಿಂದ ರೈತರ ಜಮೀನಿಗೆ ನೀರು ಹಾಯಿಸುವ ಕಾಲುವೆ ದುರಸ್ತಿ ಕಾಮಗಾರಿ ಕಳಪೆಯಾಗಿದೆ ಎಂದು ಈ ಭಾಗದ ರೈತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸೋಗಿಲು, ಮಂಗನಕೊಪ್ಪ, ಚಟ್ನಹಳ್ಳಿ, ಗಂಜೀನಹಳ್ಳಿ ಭಾಗದ ರೈತರು ಹೊಸಕೆರೆ ನೀರಿನಿಂದ ಭತ್ತವನ್ನು ಬೆಳೆಯುತ್ತಾರೆ. ₹ 49 ಲಕ್ಷ ವೆಚ್ಚದಲ್ಲಿ ಕೆರೆಯ ಮೇಲಿನ ಭಾಗದ ಸುಮಾರು 4,500 ಮೀಟರ್ ಕಾಲುವೆ ಕಾಮಗಾರಿ ಕಳಪೆಯಿಂದ ಕೂಡಿದೆ ಎಂದಿದ್ದಾರೆ.

ಕಾಲುವೆಯ ಅಕ್ಕಪಕ್ಕ ಮಣ್ಣಿನ ಮೇಲೆಯೇ ಸಿಮೆಂಟ್ ಕಾಂಕ್ರೀಟ್ ಹಾಕುತ್ತಿದ್ದಾರೆ. ಕಾಲುವೆಯ ನೀರು ಎಲ್ಲಿ ಬಸಿದು ಪೋಲಾಗುತ್ತಿದೆ ಎಂಬುದನ್ನು ಗಮನಿಸಿಲ್ಲ. 4ನೇ ಗೇಟ್ ಬಳಿ ಕಾಲುವೆ ದೊಂಬು ಬಿದ್ದಿದ್ದು, ನೀರು ಬಿಟ್ಟಾಗ ಸುಮಾರು 15 ಎಕರೆ ಭತ್ತದ ಗದ್ದೆ ಮೇಲೆ ಹರಿದು ಫಸಲು ನಷ್ಟವಾಗುತ್ತದೆ. ಇಲ್ಲಿ ದುರಸ್ತಿ ಸರಿಯಾಗಿ ಮಾಡಿದರೆ ನೀರು ಸರಾಗವಾಗಿ ಹರಿದು ಈ ಭಾಗದ ಮತ್ತು ಮುಂದಿನ ಭಾಗದ ರೈತರಿಗೂ ಅನುಕೂಲವಾಗುತ್ತದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಏನು ಉಪಯೋಗವಾಗಿಲ್ಲ ಎಂದು ರೈತರಾದ ಸಾಲಬಾಳು ಎಸ್.ಎನ್. ಗೋಪಾಲನಾಯ್ಕ, ಸೋಗಿಲು ರಾಜು, ಪರಮೇಶ್ವರಪ್ಪ, ದಾನೇಶಪ್ಪ ದೂರಿದರು.

ADVERTISEMENT

ಈ ಬಗ್ಗೆ ದೂರು ನೀಡಲು ಸಂಬಂಧ ಪಟ್ಟ ಅಧಿಕಾರಿಗಳಿಗೆ ಅನೇಕ ಬಾರಿ ದೂರವಾಣಿ ಕರೆ ಮಾಡಿದರೂ ಸ್ವಿಚ್ ಆಫ್ ಆಗಿರುತ್ತದೆ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಪೀರ‍್ಯಾನಾಯ್ಕ, ಗೋಪಾಲನಾಯ್ಕ ಹೇಳಿದರು.

ಕಾಲುವೆ ಎಲ್ಲೆಲ್ಲಿ ಹಾಳಾಗಿದೆಯೊ ಅಲ್ಲಿ ಮಾತ್ರ ಅಭಿವೃದ್ಧಿ ಕಾಮಗಾರಿ ಯನ್ನು ಹಂತಹಂತವಾಗಿ ಮಾಡಲಾಗುವುದು. ಮೊಬೈಲ್ ಸ್ವಿಚ್ ಆಫ್ ಮಾಡುವುದಿಲ್ಲ ಎಂದು ಸಣ್ಣ ನೀರಾವರಿ ಎಂಜಿನಿಯರ್ ಶಿವಪ್ಪ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.