ಕಡರನಾಯ್ಕನಹಳ್ಳಿ: ‘ಗಂಗಾಮತಸ್ಥ ಸಮಾಜ ನಂಬಿಕಸ್ಥ ಸಮಾಜ. ಹರಿವ ನೀರಿನೊಂದಿಗೆ ಬದುಕು ಬೆಸೆದುಕೊಂಡವರು. ಎಲ್ಲಾ ಸಮಾಜದೊಂದಿಗೆ ಸಾಮರಸ್ಯದಿಂದ ಇರುವವರು. ಶ್ರದ್ಧಾ ದೇವತೆ ಗಂಗಾ ಪರಮೇಶ್ವರಿ ದೇವಿಯ ಪ್ರಾಣ ಪ್ರತಿಷ್ಠಾಪನೆ ಮಾಡಿರುವುದು ಶ್ರೇಷ್ಠ ಕೈಂಕರ್ಯವಾಗಿದೆ’ ಎಂದು ಶಾಂತ ಭೀಷ್ಮ ಚೌಡಯ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಸಮೀಪದ ನಂದಿಗಾವಿ ಗ್ರಾಮದಲ್ಲಿ ಗಂಗಾ ಪರಮೇಶ್ವರಿ ದೇವಿಯ ಪ್ರಾಣ ಪ್ರತಿಷ್ಠಾಪನೆ ನಂತರ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
‘ಸಮುದಾಯಕ್ಕೆ ಗಂಗೆಯೇ ಮೂಲ. ಭೀಷ್ಮಾಚಾರ್ಯರ ವಂಶಸ್ಥರು ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಬೆಸೆದುಕೊಂಡ ಸಮಾಜವಾಗಿದೆ. ಗಂಗಾ ಪರಮೇಶ್ವರಿ ದೇವಿಯ ಪ್ರತಿಷ್ಠಾಪನೆ ಮಾಡಿದರೆ ಸಾಲದು. ಕಾಯಾ ವಾಚಾ ದೇವಿಯಲ್ಲಿ ಶ್ರದ್ಧೆಯಿಂದ ನಡೆದುಕೊಳ್ಳಬೇಕು. ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುವ ಮೂಲಕ ಸಮಾಜ ಸದೃಢವಾಗಬೇಕು’ ಎಂದು ಶ್ರೀಗಳು ಕರೆ ನೀಡಿದರು.
ಶಾಸಕನಾಗಿ ಸಾಧ್ಯವಾದಷ್ಟು ನೆರವು ನೀಡಿದ್ದೇನೆ. ಮುಂದೆಯೂ ಬೆಂಬಲಿಸುತ್ತೇನೆ ಎಂದು ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಬಿ.ಪಿ. ಹರೀಶ್ ಹೇಳಿದರು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎ.ಗೋವಿಂದ ರೆಡ್ಡಿ, ಮುಖಂಡ ಚಂದ್ರಶೇಖರ್ ಪೂಜಾರ್, ಮಾಜಿ ಶಾಸಕರಾದ ಎಸ್. ರಾಮಪ್ಪ, ಎಚ್.ಎಸ್. ಶಿವಶಂಕರ್, ಮುಖಂಡ ನಂದಿಗಾವಿ ಶ್ರೀನಿವಾಸ, ಗಂಗಾಮತ ಸಮುದಾಯದ ಜಿಲ್ಲಾ ಘಟಕದ ಅಧ್ಯಕ್ಷ ಮಾಗನಹಳ್ಳಿ ಮಂಜುನಾಥ್ ಮಾತನಾಡಿದರು.
ಶಾಂತ ಭೀಷ್ಮ ಚೌಡಯ್ಯ ಸ್ವಾಮೀಜಿ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿದರು. ದೇವಿಗೆ ವಿಶೇಷ ಪೂಜಾಲಂಕಾರ ಮಾಡಲಾಗಿತ್ತು.
ಗಂಗಾ ಪರಮೇಶ್ವರಿ ಸೇವಾ ಟ್ರಸ್ಟ್ ಗೌರವಾಧ್ಯಕ್ಷ ಹನುಮಂತಪ್ಪ, ಕೊಟ್ರಪ್ಪ, ಅಧ್ಯಕ್ಷ ಅಂಬಿಗರ ಚೌಡಪ್ಪ, ಕಾರ್ಯದರ್ಶಿ ಅಂಬಿಗರ ಮಹೇಶ್, ಸಹಾಯಕ ಅಂಬಿಗರ ರೇವಣಸಿದ್ದಪ್ಪ, ಗ್ರಾಂ. ಪಂ. ಸದಸ್ಯ ರಾಜಣ್ಣ ರೆಡ್ಡಿ ಮುಂತಾದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.