ADVERTISEMENT

ದೇಶಭಕ್ತಿಗೆ ಶಿವಾಜಿ ಪ್ರೇರಣೆಯಾಗಲಿ: ಬಸವಪ್ರಭು ಶ್ರೀ

ವಿವಿಧೆಡೆ ಛತ್ರಪತಿ ಶಿವಾಜಿ ಮಹಾರಾಜರ 393ನೇ ಜಯಂತ್ಯುತ್ಸವ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2020, 20:15 IST
Last Updated 19 ಫೆಬ್ರುವರಿ 2020, 20:15 IST
ದಾವಣಗೆರೆಯಲ್ಲಿ ಕ್ಷತ್ರಿಯ ಸಮಾಜದಿಂದ ಬುಧವಾರ ಶಿವಾಜಿ ಜಯಂತ್ಯುತ್ಸವವನ್ನು ಉದ್ಘಾಟಿಸಲಾಯಿತು
ದಾವಣಗೆರೆಯಲ್ಲಿ ಕ್ಷತ್ರಿಯ ಸಮಾಜದಿಂದ ಬುಧವಾರ ಶಿವಾಜಿ ಜಯಂತ್ಯುತ್ಸವವನ್ನು ಉದ್ಘಾಟಿಸಲಾಯಿತು   

ದಾವಣಗೆರೆ: ದೇಶಭಕ್ತಿ, ತಾಯಿನಾಡನ್ನು ಗೌರವಿಸುವ ರೀತಿ ಹಾಗೂ ಸರ್ವಜನರ ನಾಯಕನಾಗುವುದನ್ನು ನಾವು ಶಿವಾಜಿಯಿಂದ ಕಲಿಯಬೇಕಿದೆ ಎಂದು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕ್ಷತ್ರಿಯ ಮರಾಠ ಸಂಘದಿಂದ ಇಲ್ಲಿನ ಕೃಷ್ಣಭವಾನಿ ಸಭಾಭವನದಲ್ಲಿ ಬುಧವಾರ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ 393ನೇ ಜಯಂತ್ಯುತ್ಸವದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಶಿವಾಜಿ ಜಯಂತ್ಯುತ್ಸವ ಒಂದು ದಿನಕ್ಕಲ್ಲ. ಪ್ರತಿದಿನವೂ ಪ್ರಸ್ತುತ. ಶಿವಾಜಿಯ ಧೀಮಂತಿಕೆ ಶೌರ್ಯ ಸ್ಫೂರ್ತಿ
ಯನ್ನು ತುಂಬುತ್ತಿದೆ. ಇಡೀ ದೇಶಕ್ಕಲ್ಲ. ವಿಶ್ವಕ್ಕೆ ಪರಿಚಯವಿರುವ ರಾಜ ಶಿವಾಜಿ ಎಂದು ಶ್ಲಾಘಿಸಿದರು.

ADVERTISEMENT

‘ನಾವು ‌ಎಷ್ಟು ದಿವಸ ಬದುಕಿದ್ದೇವೆ ಎಂಬುದು ಮುಖ್ಯವಲ್ಲ. ಇರುವಷ್ಟು ದಿವಸ ದೇಶಕ್ಕೆ ಒಳ್ಳೆಯದು ಮಾಡುವುದರಿಂದ ಮನುಷ್ಯ ದೊಡ್ಡವನಾಗುತ್ತಾನೆ. ಶಿವಾಜಿ ತತ್ವಗಳನ್ನು ಅಳವಡಿಸಿಕೊಂಡಿ ಸಿಕೊಂಡು ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಗೆಲ್ಲಬಹುದು’ ಎಂದು ಸಲಹೆ ನೀಡಿದರು.

ಉಪನ್ಯಾಸ ನೀಡಿದ ಅಜಿತ್ ನಾಡಿಗರ್, ‘ಶಿವಾಜಿ ಹಿಂದೂ ಧರ್ಮದ ಪ್ರೇಮಿ ಎಂದು ಕೆಲವರು ಸುಳ್ಳು
ಹೇಳುತ್ತಾರೆ. ಆದರೆ ಇತರೆ ಧರ್ಮಗಳನ್ನೂ ಗೌರವಿಸುತ್ತಿದ್ದ. ಯಾವ ಮಸೀದಿ, ಚರ್ಚ್‌ಗಳನ್ನು ಆತ ಧ್ವಂಸ ಮಾಡಿಲ್ಲ.17ನೇ ಶತಮಾನದಲ್ಲೇ ಗೋಹತ್ಯೆಯನ್ನು ವಿರೋಧಿಸಿ ಅವುಗಳನ್ನು ದೈವವೆಂದು ಪ್ರತಿಪಾದಿಸಿದ ವ್ಯಕ್ತಿಯಾಗಿದ್ದಾರೆ’ ಎಂದರು.

‘ಪ್ರತಿಯೊಬ್ಬ ವಿದ್ಯಾರ್ಥಿಯೂ ಶಿವಾಜಿ ಪುಸ್ತಕಗಳನ್ನು ಓದಬೇಕು. ತಾಯಂದಿರು ಮೊದಲು ಇತಿಹಾಸವನ್ನು ಓದಿ ಮಕ್ಕಳಿಗೆ ತಿಳಿಸಬೇಕು. ಭಾರತವನ್ನು ರಕ್ಷಣೆ ಮಾಡಬೇಕು ಎಂಬುದು ಶಿವಾಜಿ ಕನಸಾಗಿದ್ದು, ಅದನ್ನು ನನಸು ಮಾಡಲು ಯುವಕರು ಮೇಲೇಳಬೇಕು. ಇತಿಹಾಸದ‌ ಪುಟದಲ್ಲಿ ಓದುವಂತಹ ಸಾಧನೆಯನ್ನು ಮಾಡಬೇಕು’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಯಶೋಧಮ್ಮ ಮರುಳಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ ಮಾತನಾಡಿದರು.

ಸಂಘದ ಅಧ್ಯಕ್ಷ ಡಿ.ಮಾಲತೇಶರಾವ್ ಜಾಧವ್ ಅಧ್ಯಕ್ಷತೆ ವಹಿಸಿದ್ದರು. ಹೊದಿಗೆರೆಯ ಷಹಜಿ ರಾಜೆ ಬೋಸ್ಲೆ ಸ್ಮಾರಕ ಮತ್ತು ಅಭಿವೃದ್ಧಿ ಸಮಿತಿ ಅಧ್ಯಕ್ಷ ವೈ.ಮಲ್ಲೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಂಘದ ಉಪಾಧ್ಯಕ್ಷ ಎಂ.ಅಜ್ಜಪ್ಪ ಪವಾರ್, ಖಜಾಂಚಿ ಎಂ.ಗೋಪಾಲ ರಾವ್ ಮಾನೆ, ಕಾರ್ಯದರ್ಶಿ ಜಿ.ಯಲ್ಲಪ್ಪ ಢಮಾಳೆ, ಪೂರ್ಣಿಮಾ ಮಂಜುನಾಥ್, ಯುವ ಘಟಕದ ಅಧ್ಯಕ್ಷ ಹನುಮಂತ ರಾವ್ ಸಾಳಂಕಿ, ಗೀತಾಬಾಯಿ ಮಾಲತೇಶ್, ಶಿವಶಂಕರ್ ಇದ್ದರು.

ಕಲಾವಿದ ಅನಿಲ್ ಗಾಯಕವಾಡ್‌ ಮಣ್ಣಿನಿಂದ ಶಿವಾಜಿ ಪ್ರತಿಮೆಯನ್ನು ಚಿತ್ರಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದಲಕ್ಷಣರಾವ್ ಸಾಳಂಕಿ, ಕೃಷ್ಣಮೂರ್ತಿ ಪವಾರ್, ಸಂತೋಷ್ ಕಾಟೆ, ರಾಘವೇಂದ್ರ ಚೌವ್ಹಾಣ್ಹಾಗೂ ಭೂಮಿಕಾ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.