ಬಸವಾಪಟ್ಟಣ: ‘1940ರಲ್ಲಿ ಸಿರಿಗೆರೆ ತರಳಬಾಳು ಮಠದ 20ನೇ ಪೀಠಾಧಿಕಾರಿಗಳಾಗಿ ಬಂದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ತಮ್ಮ ಅಭೂತಪೂರ್ವ ಸಾಧನೆಗಳಿಂದ ಇಂದಿಗೂ ಲಕ್ಷಾಂತರ ಭಕ್ತರ ಅಂತರಾಳದಲ್ಲಿ ನೆಲೆಸಿದ್ದಾರೆ’ ಎಂದು ಎಲ್.ಸಿದ್ಧಪ್ಪ ಜೂನಿಯರ್ ಕಾಲೇಜಿನ ನಿರ್ದೇಶಕ ಬಿ.ಜಿ.ನಾಗರಾಜ್ ಹೇಳಿದರು.
ಇಲ್ಲಿನ ಎಲ್.ಸಿದ್ಧಪ್ಪ ಜೂನಿಯರ್ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಲಿಂಗೈಕ್ಯ ತರಳಬಾಳು ಜಗದ್ಗುರು ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯ 32ನೇ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘12ನೇ ಶತಮಾನದಲ್ಲಿ ಕಲ್ಯಾಣದ ಶರಣರು ಬೆಳಗಿದ ದೀವಿಗೆಯನ್ನು ಸಿರಿಗೆರೆಯಲ್ಲಿ ಮತ್ತೆ ಬೆಳಗಿ, ವಿಶ್ವಗುರು ಬಸವಣ್ಣ ಅವರ ತತ್ವ ಸಿದ್ಧಾಂತಗಳ ತಳಹದಿಯಲ್ಲಿ ಜಾತಿ ರಹಿತ ಸಮಾಜ ನಿಮಾಣದಲ್ಲಿ ತೊಡಗಿದ್ದರು. ಅಜ್ಞಾನ, ಮೂಢನಂಬಿಕೆ, ಅನಕ್ಷರತೆಗಳನ್ನು ದೂರಮಾಡಿ ವರ್ಗ ರಹಿತ ಸಮಾಜ ರಚನೆಗೆ ತಮ್ಮ ಅಮೂಲ್ಯ ಕೊಡುಗೆ ನೀಡಿದ ಶಿವಕುಮಾರ ಶ್ರೀಗಳು ಎಂದೆಂದಿಗೂ ಅಮರರಾಗಿದ್ದಾರೆ’ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಎಲ್.ಜಿ.ಮಧುಕುಮಾರ್ ಮಾತನಾಡಿ, ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಜನಸಾಮಾನ್ಯರನ್ನು ಒಂದುಗೂಡಿಸಲು, ವಿವಾಹ, ಗೃಹಪ್ರವೇಶ, ಶಿವಗಣಾರಾಧನೆಯನ್ನು ಶರಣ ಸಮ್ಮೇಳನಗಳನ್ನಾಗಿಸಿದರು. ತರಳಬಾಳು ವಿದ್ಯಾ ಸಂಸ್ಥೆಯನ್ನು ಸ್ಥಾಪಿಸಿ, ನಾಡಿನಾದ್ಯಂತ ನೂರಾರು ಪ್ರೌಢಶಾಲೆಗಳು, ಪದವಿಪೂರ್ವ ಕಾಲೇಜುಗಳು, ಪದವಿ ಕಾಲೇಜುಗಳು, ಬಿ.ಇಡಿ, ಎಂಜಿನಿಯರಿಂಗ್ ಕಾಲೇಜುಗಳನ್ನು ತೆರದು ಸಹಸ್ರಾರು ಮಕ್ಕಳಿಗೆ ಶಿಕ್ಷಣ ಒದಗಿಸಿದರು’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಪದ್ಮಪ್ಪ, ಕಾಲೇಜಿನ ನಿರ್ದೇಶಕರಾದ ಎಂ.ಜಿ.ಜಯದೇವಪ್ಪ, ಜಿ.ಬಿ.ಜಗನ್ನಾಥ್, ಬಿ.ಶಿವಮೂರ್ತಿ ಹಾಗೂ ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.