ದಾವಣಗೆರೆ: ಕೊರೊನಾ ಸಂಕಷ್ಟ ಕಾಲದಲ್ಲಿ ಜನರನ್ನು ಈ ಸೋಂಕಿನಿಂದ ಪಾರು ಮಾಡುವುದು ಹೇಗೆ ಎಂಬುದನ್ನು ಯೋಚಿಸಬೇಕು. ಇಂಥ ಸಂದರ್ಭದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ ಮತ್ತು ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಪರಸ್ಪರ ಆರೋಪ– ಪ್ರತ್ಯಾರೋಪಗಳನ್ನು ಮಾಡುವುದನ್ನು ನಿಲ್ಲಿಸಬೇಕು ಎಂದು ಜೆಡಿಎಸ್ ಮುಖಂಡ ಕಲ್ಲೇರುದ್ರೇಶ್ ಸಲಹೆ ನೀಡಿದರು.
ನಾಯಕರಿಬ್ಬರು ಈ ರೀತಿ ಕಚ್ಚಾಟದಲ್ಲಿ ತೊಡಗಿದರೆ ಅಧಿಕಾರಿ ವರ್ಗದಲ್ಲಿ ಸೋಮಾರಿತನ ಹೆಚ್ಚಾಗುತ್ತದೆ. ಇಬ್ಬರೂ ಒಮ್ಮತದಿಂದ ಇದ್ದರೆ ಅಧಿಕಾರಿಗಳು ಎಚ್ಚರದಿಂದ ಕೆಲಸ ಮಾಡುತ್ತಾರೆ. ನಿಮ್ಮ ವಾಗ್ವಾದದಿಂದ ಜಿಲ್ಲೆಗೆ ಅನ್ಯಾಯವಾಗಬಾರದು ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಂಸದ ಜಿ.ಎಂ. ಸಿದ್ದೇಶ್ವರ ದೆಹಲಿ ಮಟ್ಟದಲ್ಲಿ ಜಿಲ್ಲೆಗೆ ಅವಶ್ಯಕವಾಗಿರುವ ಆಮ್ಲಜನಕ, ರೆಮ್ಡಿಸಿವಿರ್, ಲಸಿಕೆ ತರುವ ಪ್ರಯತ್ನ ಮಾಡಬೇಕು. ಶಾಸಕ ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ತಮ್ಮ ಪ್ರಭಾವವನ್ನು ರಾಜ್ಯಮಟ್ಟದಲ್ಲಿ ಬೀರಿ ಜಿಲ್ಲೆಗೆ ಬೇಕಾದ ಕೆಲಸ ಮಾಡಿಸಬೇಕು. ಜತೆಗೆ ಸಂಸದರೂ, ಶಾಮನೂರು ಕುಟುಂಬ ಶ್ರೀಮಂತ ಆಗಿರುವುದರಿಂದ ಎರಡೂ ಕಡೆಯವರು ತಮ್ಮ ಶಕ್ತಿಗೆ ಅನುಗುಣವಾಗಿ ವೈಯಕ್ತಿಕ ನೆರವನ್ನು ನೀಡಬೇಕು ಎಂದು ಮನವಿ ಮಾಡಿದರು.
‘ವೈದ್ಯರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ನರ್ಸ್, ‘ಡಿ’ ಗ್ರೂಪ್ ನೌಕರರು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ವೇತನಕ್ಕಾಗಿ ಅಲ್ಲ, ಇಲ್ಲಿನ ಗಾಳಿ, ನೀರು, ಆಹಾರ ಸೇವಿಸುತ್ತೀರಿ. ಅದರ ಋಣ ತೀರಿಸುವ ಅವಕಾಶ ಇದು ಎಂದು ಇನ್ನಷ್ಟು ಪ್ರಾಮಾಣಿಕವಾಗಿ, ಲೋಪವಿಲ್ಲದೇ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.